Home » ಹಲವು ತಿಂಗಳಿನಿಂದ ಬಾಕಿ ಇರುವ ಕಡತಗಳ ಶೀಘ್ರ ವಿಲೇವಾರಿಗೆ ಒತ್ತು.
 

ಹಲವು ತಿಂಗಳಿನಿಂದ ಬಾಕಿ ಇರುವ ಕಡತಗಳ ಶೀಘ್ರ ವಿಲೇವಾರಿಗೆ ಒತ್ತು.

ಕುಂದಾಪುರ ಉಪ ವಿಭಾಗಾಧಿಕಾರಿಗಳ ಉಪಸ್ಥಿತಿಯಲ್ಲಿ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಸೂಚನೆ ನೀಡಿದ ಶಾಸಕ ಗಂಟಿಹೊಳೆ

by Kundapur Xpress
Spread the love

ಬೈಂದೂರು  : ವಿಧಾನ ಸಭಾ ಕ್ಷೇತ್ರದಲ್ಲಿ ಕಂದಾಯ, ಸರ್ವೇ ಹಾಗೂ ಅರಣ್ಯ ಇಲಾಖೆ ಸಹಿತ ಇನ್ನಿತರ ಇಲಾಖೆಗಳ ಹಂತದಲ್ಲಿ ಹಲವು ಸಮಯಗಳಿಂದ ಬಾಕಿ ಇರುವ ಕಡತಗಳ ವಿಲೇವಾರಿ ಕುರಿತು ಕುಂದಾಪುರ ಉಪ ವಿಭಾಗಾಧಿಕಾರಿಗಳ ಉಪಸ್ಥಿತಿಯಲ್ಲಿ ಬೈಂದೂರು ತಾಲೂಕು ಕಚೇರಿ ಕೋರ್ಟ್ ಹಾಲ್ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆಯವರು ಇಲಾಖೆಗಳ ವಿವಿಧ ವಿಭಾಗಗಳಲ್ಲಿ ಹಲವು ತಿಂಗಳಿಂದ ಬಾಕಿ ಇರುವ ಕಡತಗಳ ತ್ವರಿತ ವಿಲೇವಾರಿ ಮಾಡಲು ಸೂಚನೆ ನೀಡಿದರು.

ಅಕ್ರಮ ಸಕ್ರಮ ಅರ್ಜಿಗಳನ್ನು ತಂತ್ರಾಂಶದಲ್ಲಿ ಅಳವಡಿಸಲು ಕ್ರಮ :

ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 179 ಅರ್ಜಿಗಳು ಬಗರ್ ಹುಕುಂ ತಂತ್ರಾಂಶದಲ್ಲಿ ಸೇರಿಸಲು ಬಾಕಿ ಇದ್ದು ಇದರಿಂದ ಅರ್ಹ ಫಲಾನುಭವಿಗಳು ಯೋಜನೆಯ ಸೌಲಭ್ಯದಿಂದ ವಂಚಿತರಾಗುತ್ತಿರುವ ಕಾರಣ ಸದರಿ ಅರ್ಜಿಗಳನ್ನು ತಂತ್ರಾಂಶದಲ್ಲಿ ಅಳವಡಿಸಲು ತಹಶೀಲ್ದಾರರಿಗೆ ಸೂಚನೆ ನೀಡಿದರು.

ಪ್ಲಾಟಿಂಗ್ ಸಮಸ್ಯೆ ನಿವಾರಣೆಗೆ ಪ್ರಕ್ರಿಯೆ ಚುರುಕುಗೊಳಿಸಿ :

ಜಡ್ಕಲ್ ಹಾಗೂ ಮುದೂರು ಗ್ರಾಮಗಳಲ್ಲಿ ಪ್ಲಾಟಿಂಗ್ ಸಮಸ್ಯೆಯಿಂದಾಗಿ ಭೂ ಪರಿವರ್ತನೆ, ವಿಭಾಗ ಪತ್ರಗಳು ಆಗದೇ ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದು ಪ್ಲಾಟಿಂಗ್ ಸಮಸ್ಯೆ ನಿವಾರಣೆ ಸಂಬಂಧ ಈಗಾಗಲೇ ಪ್ರಾರಂಬಿಸಿದ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಸರ್ವೇ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕೊಲ್ಲೂರು ಕಂದಾಯ -ಅರಣ್ಯ ಗಡಿ ಗುರುತು ವರದಿಗೆ ಕ್ರಮಕ್ಕೆ ಸೂಚನೆ :

ಕೊಲ್ಲೂರು ಗ್ರಾಮದ 121 ಹಾಗೂ 156 ಸರ್ವೇ ನಂಬ್ರಗಳಲ್ಲಿ ಕಂದಾಯ ಹಾಗೂ ಅರಣ್ಯ ಭೂಮಿಯ ಗಡಿ ರೇಖೆಯ ಕುರಿತು ಗೊಂದಲ ಇರುವ ಕಾರಣ ಈ ಹಿಂದೆ ಜಂಟಿ ಸರ್ವೇ ನಡೆಸಲು ಸೂಚನೆ ನೀಡಲಾಗಿತ್ತು. ಆದರೆ ಅರಣ್ಯ ಕಾರ್ಯಪಡೆಯ ವರದಿ ಬರಲು ಬಾಕಿ ಇರುವುದರಿಂದ ಸದರಿ ವರದಿ ಬಂದ ತಕ್ಷಣ ಜಂಟಿ ಸರ್ವೇ ಕೈಗೊಂಡು ಆ ಭಾಗದಲ್ಲಿ ಅರೋಗ್ಯ ಇಲಾಖೆಗೆ ಜಾಗ ಮಂಜೂರು ಮಾಡಲು, 94 ಸಿ ಹಾಗೂ ಅಕ್ರಮ ಸಕ್ರಮ ಅರ್ಜಿಗಳ ವಿಲೇವಾರಿಗೆ ಕ್ರಮಕ್ಕೆ ಸೂಚನೆ ನೀಡಿದರು.

ಪೊರಂಬೋಕು ಶೀರ್ಷಿಕೆ ವಿರಹಿತ ಪಡಿಸಿ ಅರ್ಹರಿಗೆ 94 ಸಿ ಹಕ್ಕು ಪತ್ರ ವಿತರಣೆಗೆ ಕ್ರಮ :

ಗ್ರಾಮೀಣ ಭಾಗದಲ್ಲಿ ಹಲವು ವರ್ಷಗಳಿಂದ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ವಾಸವಿದ್ದರೂ ಸರಕಾರಿ ಪೋರಂಬೋಕು ಜಾಗ ಇರುವ ಹಿನ್ನಲೆಯಲ್ಲಿ ಕ್ಷೇತ್ರದ ಕಿರಿಮಂಜೇಶ್ವರ, ಕಂಬದ ಕೋಣೆ, ಶಿರೂರು, ಗುಜ್ಜಾಡಿ, ದೇವಲಕುಂದ, ವಂಡ್ಸೆ ಹಾಗೂ ಹಟ್ಟಿಯಂಗಡಿ ಗ್ರಾಮಗಳ ಸುಮಾರು 119 ಅರ್ಜಿಗಳು ವಿಲೇವಾರಿಗೆ ಬಾಕಿ ಇರುವುದರಿಂದ ಪರಂಬೋಕು ಶೀರ್ಷಿಕೆಯನ್ನು ವಿರಹಿತ ಪಡಿಸಿ ಅರ್ಹರಿಗೆ 94 ಸಿ ಹಕ್ಕು ಪತ್ರ ನೀಡಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಇರುವುರಿಂದ ತಹಶೀಲ್ದಾರ್ ಹಾಗೂ ಎಸಿ ಕಚೇರಿಯಿಂದ ಸೂಕ್ತ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲು ಸೂಚನೆ ನೀಡಿದರು.ಆರ್ ಆರ್ ಟಿ ತಿದ್ದು ಪಡಿ ಕಡತ : ಸಿಬ್ಬಂದಿಗಳಿಗೆ ತರಾಟೆ, ಅರ್ಜಿಗಳನ್ನು ಶೂನ್ಯಕ್ಕೆ ಇಳಿಸಲು ಸೂಚನೆ :

ಬೈಂದೂರು ಹಾಗೂ ಕುಂದಾಪುರ ತಾಲೂಕು ಕಚೇರಿಯಲ್ಲಿ ಆರ್ ಆರ್ ಟಿ ತಿದ್ದು ಪಡಿಗೆ ಸಂಬಂಧಿಸಿದಂತೆ 516 ಕಡತಗಳಿದ್ದು,1 ವರ್ಷ ಮೇಲ್ಪಟ್ಟು ಸಾಕಷ್ಟು ಅರ್ಜಿಗಳೂ ಇರುವುದನ್ನು ಗಮನಿಸಿದ ಶಾಸಕರು ತಾಲೂಕು ಕಚೇರಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದು ಕೊಂಡರು ಮತ್ತು ಕೂಡಲೇ ಸದ್ರಿ ಅರ್ಜಿಗಳ ವಿಲೇವಾರಿಗೆ ಸೂಚನೆ ನೀಡಿದರು.

ವಿವಿಧ ಸಾರ್ವಜನಿಕ ಉದ್ದೇಶಕ್ಕಾಗಿ ಜಮೀನು ಕಾಯ್ದಿರಿಸಲು ತ್ವರಿತ ಕ್ರಮ ವಹಿಸಿ :

*ಕ್ಷೇತ್ರ ವ್ಯಾಪ್ತಿಯಲ್ಲಿ ಆರೋಗ್ಯ ಕೇಂದ್ರ ಕಟ್ಟಡಗಳು, ಸ್ಮಶಾನ ಭೂಮಿ, ಅಂಗನವಾಡಿ ಕಟ್ಟಡಗಳು, ಗ್ರಾಮ ಪಂಚಾಯತ್ ಕಟ್ಟಡಗಳು, ಬಿಎಸ್ ಎನ್ ಎಲ್ ಟವರ್, ಸೇರಿದಂತೆ ಇನ್ನಿತರ ಸಾರ್ವಜನಿಕ ಉದ್ದೇಶಕ್ಕಾಗಿ ಜಾಗ ಕಾಯ್ದಿರಿಸಲು ಸುಮಾರು 30 ವಿವಿಧ ಪ್ರಸ್ತಾವನೆಗಳು ಇದ್ದು, ಈ ಎಲ್ಲಾ ಪ್ರಸ್ತಾವನೆಗಳನ್ನು ಯಾವುದೇ ವಿಳಂಬ ಮಾಡದೇ ಜಿಲ್ಲಾಧಿಕಾರಿ ಹಂತಕ್ಕೆ ಕಳುಹಿಸಲು ಸೂಚನೆ ನೀಡಿದರು.

ಅರಣ್ಯ – ಕಂದಾಯ ಜಂಟಿ ಸರ್ವೇ ಗೆ ಅಧಿಕಾರಿಗಳಿಗೆ ತಾಕೀತು :

ಕ್ಷೇತ್ರದ ಹಲವು ಕಡೆ ಡೀಮ್ಡ್ ಫಾರೆಸ್ಟ್ ಪ್ರದೇಶಗಳಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ವರದಿ ನೀಡಲು ವಿಳಂಬ ಮಾಡುತ್ತಿರುವ ಕಾರಣ ಸಾವಿರಾರು 94 ಸಿ ಹಾಗೂ ಅಕ್ರಮ ಸಕ್ರಮ ಅರ್ಜಿಗಳನ್ನು ಮಂಜೂರು ಮಾಡಲಾಗುತ್ತಿಲ್ಲ. ಗೊಳಿಹೊಳೆ ಹಾಗೂ ಹಳ್ಳಿ ಹೊಳೆ ಭಾಗಗಳಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಬಂದ ಜಂಟಿ ಸರ್ವೇ ಬೇಡಿಕೆಗೆ ಇಲಾಖೆ ಇನ್ನೂ ಕ್ರಮ ವಹಿಸಿಲ್ಲದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಶಾಸಕರು ಕೂಡಲೇ ಜಂಟಿ ಸರ್ವೇಗೆ ಕ್ರಮ ವಹಿಸಲು ತಾಕೀತು ಮಾಡಿದರು.

ಆರೋಗ್ಯ ಇಲಾಖೆಯಡಿ 108ಆಂಬುಲೆನ್ಸ್ ಸೇವೆ ಸಮರ್ಪಕ ಗೊಳಿಸಲು ಆರೋಗ್ಯ ಅಧಿಕಾರಿಗಳಗೆ ಸೂಚನೆ :

ಈ ಬಗ್ಗೆ ಎರಡು ಬಾರಿ ಶಾಸಕರಿಂದ ಸದನದಲ್ಲಿ ಪ್ರಸ್ತಾಪ ಕಳೆದೆರಡು ವರ್ಷಗಳಿಂದ ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆಯ ಸಮರ್ಪಕ ನಿರ್ವಹಣೆ ಇಲ್ಲದೇ ಸೊರಗುತ್ತಿದೆ. ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಚಾಲಕರ ಕೊರತೆ ಮತ್ತು ಸಿಬ್ಬಂದಿಗಳ ರಾಜೀನಾಮೆ ಕಾರಣದಿಂದ ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆ ಇರುವುದಾಗಿದೆ. ಬೈಂದೂರು ಕ್ಷೇತ್ರವು ಅತೀ ಹೆಚ್ಚಿನ ಗ್ರಾಮೀಣ ಪ್ರದೇಶ ಇರುವುದರಿಂದ ಹೆಚ್ಚು ಹೊಡೆತ ಬೀಳುತ್ತಿದೆ. ಈ ಕಾರಣದಿಂದಲೇ ಕಳೆದ ಬಾರಿ ಡಿಸೆಂಬರ್ ನಲ್ಲಿ ನಡೆದ ಚಳಿಗಾಲದ ಬೆಳಗಾವಿ ಅಧಿವೇಶನ ಹಾಗೂ ಅದರ ಹಿಂದಿನ ಅಧಿವೇಶನದಲ್ಲೂ ಅಸಮರ್ಪಕ ಆಂಬುಲೆನ್ಸ್ ಸೇವೆಗಳ ಬಗ್ಗೆ ಸದನದ ಗಮನ ಸೆಳೆದಿದ್ದೇನೆ. ಆದರೆ ಸರಿ ಪಡಿಸುವ ಭರವಸೆ ನೀಡಲಾಗಿದೆಯೇ ಹೊರತು ಪೂರ್ಣ ಪ್ರಮಾಣದ ಸಮರ್ಪಕ ಸೇವೆ ನೀಡಲು ಸರಕಾರ ವಿಫಲವಾಗಿದೆ. ಮುಂದುವರಿದು ನಿರಂತರವಾಗಿ ಜಿಲ್ಲಾಡಳಿತ ಹಾಗೂ ಇಲಾಖೆಗೆ ವಿವಿಧ ಸಂದರ್ಭದಲ್ಲಿ ಅವ್ಯವಸ್ಥೆ ಸರಿ ಪಡಿಸಲು ಮನವಿ ಮಾಡಲಾಗಿದೆ.ಹಾಗಾಗಿ ಈ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚೆತ್ತು ಕೊಂಡು ಸೂಕ್ತ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಗಳು, ಭೂ ದಾಖಲೆಗಳ ಉಪ ನಿರ್ದೇಶಕರು ಉಡುಪಿ ಜಿಲ್ಲೆ, ಕುಂದಾಪುರ ಹಾಗೂ ಬೈಂದೂರು ತಹಶೀಲ್ದಾರರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ವಲಯ ಅರಣ್ಯ ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿ, ಬೈಂದೂರು ಹಾಗೂ ವಂಡ್ಸೆ ಹೋಬಳಿ ಉಪ ತಹಶೀಲ್ದಾರ ರು,ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.

 

Related Articles

error: Content is protected !!