ಕುಂದಾಪುರ : ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಕೋಟೇಶ್ವರ ಇಲ್ಲಿ ಲಯನ್ಸ್ ಕ್ಲಬ್ ಮಿಡ್ ಟೌನ್ ಉಡುಪಿ ಇವರ ಸಹಯೋಗದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಹಾಕಿ ದಂತಕಥೆ. ಶ್ರೇಷ್ಠ ಹಾಕಿ ಕ್ರೀಡಾಪಟು ಮೇಜರ್ ಧ್ಯಾನ್ ಚಂದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕವಾಗಿ ಸರಸ್ವತಿ ಪದವಿ ಪೂರ್ವ ಕಾಲೇಜು ಗಂಗೊಳ್ಳಿಯ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ ಶೆಟ್ಟಿ ಅವರು ಚಾಲನೆಗೈದರು. ಮೇಜರ್ ಧ್ಯಾನ್ ಚಂದ್ ಅವರು ಭಾರತದ ಕ್ರೀಡಾ ಲೋಕಕ್ಕೆ ನೀಡಿದ ಅಪೂರ್ವ ಕೊಡುಗೆಗಾಗಿ ಭಾರತ ಸರಕಾರವು ಅವರ ಜನ್ಮ ದಿನವಾದ ಅಗಸ್ಟ್ 29 ರಂದು ದೇಶದಾದ್ಯಂತ ರಾಷ್ಟ್ರೀಯ ಕ್ರೀಡಾ ದಿವಸವನ್ನು ಆಚರಿಸುತ್ತಿದೆ. ಧ್ಯಾನ್ ಚಂದ್ ಇವತ್ತಿನ ಕ್ರೀಡಾ ಪಟುಗಳಿಗೆ ಸ್ಪೂರ್ತಿಯ ಚಿಲುಮೆಯಾಗಿ ಭಾರತದ ಕ್ರೀಡೆಯನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸಬೇಕು ಎಂದರು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ನಿರಂತರ. ಕಲಿಕೆ, ಸತತ ಪರಿಶ್ರಮ, ಬದ್ಧತೆ ಮತ್ತು ಶಿಸ್ತು ಅತ್ಯಂತ ಪ್ರಮುಖ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಪ್ರೊ. ಸುಬ್ರಹ್ಮಣ್ಯ ಎ. ಅವರು ಮಾತನಾಡಿ ವಿದ್ಯಾರ್ಥಿಗಳು ಒಂದು ನಿರ್ದಿಷ್ಟ ಗುರಿಯೊಂದಿಗೆ ನಿರಂತರ ಅಭ್ಯಾಸದೊಂದಿಗೆ ಪ್ರಯತ್ನ ಪಟ್ಟಲ್ಲಿ ಯಾವುದೇ ಕ್ಷೇತ್ರದಲ್ಲಾದರೂ ಯಶಸ್ಸನ್ನು ಗಳಿಸಬಹುದು ಅಲ್ಲದೆ ಇಂತಹ ಸಾಧಕರು ವಿದ್ಯಾರ್ಥಿಗಳಿಗೆ ಸಾಧನೆಗೆ ಸ್ಫೂರ್ತಿ ಆಗಬೇಕು ಎಂದರು. ಸಮಾರಂಭದಲ್ಲಿ ನಾಗರಾಜ ಶೆಟ್ಟಿ ಅವರನ್ನು ಕಾಲೇಜಿನ ಪರವಾಗಿ ಗೌರವಿಸಲಾಯಿತು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಹಾಗೂ ಲಯನ್ಸ್ ಕ್ಲಬ್ ಮಿಡ್ ಟೌನ್ ಉಡುಪಿ ಇದರ ಅಧ್ಯಕ್ಷರು ಆದ ಡಾ. ರಾಮಚಂದ್ರ ಪಾಟ್ಕರ್ ಪ್ರಾಸ್ತವಿಕ ಮಾತುಗಳೊಂದಿಗೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಭಾಗೀರಥಿ ನಾಯ್ಕ ಅವರು ವಂದನಾರ್ಪಣೆಗೈದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ ಆಚಾರಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು ಕಾಲೇಜಿನ ಕ್ರೀಡಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

