ಕೋಟ : ಸೃಜನಶೀಲ ಚಟುವಟಿಕೆಗೆ ಕಲಿಕಾ ಹಬ್ಬ ಸಹಕಾರಿ ಎಂದು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಜ್ಮುಂ ಅಭಿಪ್ರಾಯಪಟ್ಟರು ಅವರು ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ,ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬ್ರಹ್ಮಾವರ ವಲಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ದೂಳಂಗಡಿ) ಹಂಗಾರಕಟ್ಟೆ ಇವರುಗಳ ಸಹಭಾಗಿತ್ವದಡಿ 2024-25ನೇ ಸಾಲಿನ ಹಂಗಾರಕಟ್ಟೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ವಿವಿಧ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎನ್ನುವ ಉದ್ದೇಶದಿಂದ ಸರಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸಿದೆ ಇದರಲ್ಲಿ ಪೋಷಕರ ಪಾಲ್ಗೊಳ್ಳುವ ಅವರ ಜತೆ ಸಂವಹನ ನಡೆಸಲು ಸಹಕಾರಿಯಾಗಿದೆ. ಹಂಗಾರಕಟ್ಟೆ ಈ ಶಿಕ್ಷಣ ಸಂಸ್ಥೆ ಶೈಕ್ಷಣಿಕ ಕಾರ್ಯದಲ್ಲಿ ಸಾಧನೆ ತೊರಿದ್ದು ವಿಜ್ಞಾನ ಮಾದರಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ರೇಖಾ ಉಡುಪ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಬ್ರಹ್ಮಾವರ ವಲಯ ಶಿಕ್ಷಣ ಇಲಾಖೆಯ ಸಂಯೋಜಕ ಪ್ರಕಾಶ್ ಬಿ.ಬಿ ಉಪಸ್ಥಿತರಿದ್ದರು. ಹಂಗಾರಕಟ್ಟೆ ಸಿಆರ್ಪಿ ಮಾಲಿನಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಶಿಕ್ಷಕಿ ಪ್ರಸಿಲ್ಲಾ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಕಾರ್ತಿಕ್ ಮತ್ತು ಸಾನ್ವಿ ನಿರೂಪಿಸಿದರು.ಶಿಕ್ಷಕಿ ವೀಣಾ ಶೆಟ್ಟಿ ವಂದಿಸಿದರು.
ವಿಶೇಷತೆ
ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಿಗೆ ಸಂಪನ್ಮೂಲ ವ್ಯಕ್ತಿಗಳ ಮೂಲಕ ರಚಿತಗೊಂಡ ವಿವಿಧ ಮಾದರಿಯ ಕಿರೀಟ ತೊಡಿಸಲಾಯಿತು. ವೇದಿಕೆಯಲ್ಲಿದ್ದ ಬೋಡ್೯ನಲ್ಲಿ ಕಲಿಕಾ ಹಬ್ಬದ ಅಕ್ಷರವನ್ನು ಮುಖ್ಯ ಅತಿಥಿಗಳು ತೆರೆದರು ಅದರ ಸನಿಹ ವಿದ್ಯಾರ್ಥಿಗಳು ತಮ್ಮ ಬಣ್ಣ ಲೇಪಿತ ಹಸ್ತಗಳನ್ನು ಮುದ್ರಿಸಿದರು.ಏಳು ಕೋಣೆಗಳಲ್ಲಿ ವಿವಿಧ ರೀತಿಯ ಚಟುವಟಿಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ಸಂಪನ್ನಗೊಂಡವು.

