ಕುಂದಾಪುರ : ಕುಂದಾಪುರದ ಕಾಂಗ್ರೆಸ್ ಮುಖಂಡರು ಜನರ ಹಾಗೂ ಸಾರ್ವಜನಿಕರ ಹಾದಿ ತಪ್ಪಿಸುವ ಉದ್ದೇಶದಿಂದ ಶಾಸಕರು ಪ್ರಭಾವ ಬಳಸಿ 25 ಎಕ್ರೆ ಗೇರು ಲೀಸ್ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಮಾಜಿ ಶಾಸಕ ದಿ.ಎ.ಜಿ.ಕೊಡ್ಡಿಯವರ ಐದು ಜನ ಮಕ್ಕಳಾದ ನಾವು ಒಂದೇ ಒಂದು ಸೆಂಟ್ಸ್ ಗೇರು ಲೀಸ್ ಪಡೆದಿಲ್ಲ. ಈ ಬಗ್ಗೆ ಸೂಕ್ತ ದಾಖಲೆ ನೀಡಬೇಕು ಇಲ್ಲದಿದ್ದಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಕುಂದಾಪುರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಆಗ್ರಹಿಸಿದ್ದಾರೆ
ಕುಂದಾಪುರದ ಹೊಟೇಲ್ ಶೆರೋನ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ ರಾಜ್ಯ ಕಾಂಗ್ರೆಸ್ ಸರಕಾರದ ಅಸಮರ್ಪಕ ಆದೇಶ ಹಾಗೂ ಆಡಳಿತದ ವಿರುದ್ಧ ಐದು ಅಂಶಗಳನ್ನಿಟ್ಟುಕೊಂಡು ಬಿಜೆಪಿ ವತಿಯಿಂದ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಎದುರು ಏಕಕಾಲದಲ್ಲಿ ಪ್ರತಿಭಟನೆ ನಡೆಸಲಾಗಿದೆ ಬಿಜೆಪಿಯವರು ಸರಕಾರದ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದಿಂದ ಸತ್ಯದರ್ಶನ ಪ್ರತಿಭಟನಾ ಸಪ್ತಾಹ ನಡೆಸಿದೆ. ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಯಾವುದೇ ವ್ಯಕ್ತಿ ಅಥವಾ ರಾಜಕಾರಣಿ ವಿರುದ್ಧ ವೈಯಕ್ತಿಕ ಆರೋಪ ಮಾಡಿಲ್ಲ. ಆದರೆ ಕಾಂಗ್ರೆಸ್ ಮುಖಂಡರು ವೈಯಕ್ತಿಕ ಟೀಕೆ ಮಾಡುತ್ತಿದ್ದು, ವೈಯಕ್ತಿಕ ಟೀಕೆ ಮಾಡುವಾಗ ಜಾಗ್ರತೆ ವಹಿಸುವುದು ಉತ್ತಮ ಎಂದು ಕಾಂಗ್ರೆಸ್ ವಿರುದ್ಧ ಕೊಡ್ಗಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಧುರೀಣರು ಸತ್ಯದರ್ಶನ ಮಾಡುವುದನ್ನು ಹೊರತುಪಡಿಸಿ ಬಿಜೆಪಿ ಹಾಗೂ ಶಾಸಕರನ್ನು ಗುರಿಯಾಗಿಸಿಕೊಂಡು ಸುಳ್ಳು ವಿಚಾರಗಳನ್ನು ಹೇಳುತ್ತಿದ್ದು, ಶಾಸಕರ ಬಗ್ಗೆ ಆಧಾರರಹಿತ ವಿಚಾರಗಳನ್ನು ಪ್ರಸ್ತಾಪಿಸಿರುವುದು ಖಂಡನೀಯ. ಎರಡು ವರ್ಷದಲ್ಲಿ ವೈಯಕ್ತಿಕ ಲಾಭಕ್ಕಾಗಿ ಒಂದೇ ಒಂದು ಅರ್ಜಿಯನ್ನು ಸಚಿವರಿಗಾಗಲೀ ಇಲಾಖೆಗಾಗಲೀ ನೀಡಿಲ್ಲ ಎಂದರು.
ಅಕ್ರಮ ಸಕ್ರಮ ಸಮಿತಿಯಲ್ಲಿ ಕಾಂಗ್ರೆಸ್ ನ ಪ್ರಭಾವಿ ಮುಖಂಡರಿದ್ದು, ಈ ಹಿಂದೆ ಇದ್ದ ವ್ಯವಸ್ಥೆ ಮತ್ತು ಈಗಿನ ವ್ಯವಸ್ಥೆಗಳ ಬಗ್ಗೆ ಅವರನ್ನೇ ಕೇಳಿ ಎಂದು ಕಾಂಗ್ರೆಸ್ ಮುಖಂಡರ ಕಾಲೆಳೆದ ಅವರು, ಈ ಹಿಂದೆ ಅಕ್ರಮ ಸಕ್ರಮ ಎಲ್ಲಾ ಅರ್ಜಿಗಳು ಸಮಿತಿಯ ಮುಂದೆ ಬರುತ್ತಿತ್ತು. ಈಗ ಅರ್ಜಿಗಳನ್ನು ಸಮಿತಿ ಗಮನಕ್ಕೆ ತಾರದೆ ನೇರವಾಗಿ ತಿರಸ್ಕಾರ ಮಾಡಲಾಗುತ್ತಿದೆ. ಎರಡು ವರ್ಷಗಳಲ್ಲಿ ಕುಂದಾಪುರ ತಾಲೂಕಿನಲ್ಲಿ 60 ಮತ್ತು ಬ್ರಹ್ಮಾವರ ತಾಲೂಕಿನ 18 ಅರ್ಜಿಗಳ ಸೇರಿದಂತೆ ಒಟ್ಟು 78 ಅರ್ಜಿಗಳು ಮಾತ್ರ ಸಮಿತಿಯ ಮುಂದೆ ಬಂದಿದೆ. ಪ್ರತಿ ತಿಂಗಳು ಅಕ್ರಮ ಸಕ್ರಮ ಸಮಿತಿಯ ನಾಲ್ಕು ಬೈಠಕ್ ನಡೆಸುವಂತೆ ತಹಶೀಲ್ದಾರ್ರಿಗೆ ಲಿಖಿತವಾಗಿ ಕೊಟ್ಟಿದ್ದು, ಕಳೆದ ಎರಡು ವರ್ಷಗಳಲ್ಲಿ ಒಟ್ಟು 7 ಬೈಠಕ್ ಮಾತ್ರ ನಡೆದಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ ಶೆಟ್ಟಿ ಕಾಡೂರು, ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ ಶೆಟ್ಟಿ ಗೋಪಾಡಿ, ಕಾರ್ಯದರ್ಶಿ ಸುಧೀರ್ ಕೆ.ಎಸ್. ಮಹಿಳಾ ಮಾಂಡಲ ಅಧ್ಯಕ್ಷೆ ಸೌರಭಿ ಪೈ ಯುವಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಜಿಲ್ಲಾ ಪ್ರಭಾರಿ ರಾಜೇಶ ಕಾವೇರಿ ಮೊದಲಾದವರು ಉಪಸ್ಥಿತರಿದ್ದರು.

