ಮೂಡ್ಲಕಟ್ಟೆ : ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಕಮ್ಯುನಿಟಿ ಸರ್ವಿಸ್ ಕ್ಲಬ್ ಹಾಗೂ ಯೋಗ ಮತ್ತು ಆಧ್ಯಾತ್ಮಿಕ ಸಂಘದ ಅಡಿಯಲ್ಲಿ ನಶಾ ಮುಕ್ತ ಭಾರತ ಅಭಿಯಾನವನ್ನು ಹಮ್ಮಿಕೊಂಡಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ, ಕಂಡ್ಲೂರು ಇದರ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಭೀಮಾಶಂಕರ್ ಸಿನ್ನೂರ ರವರನ್ನು ವಿದ್ಯಾರ್ಥಿಗಳು ಮಾನವ ಸರಪಳಿಯ ಮೂಲಕ ರಚಿಸಿದ ‘ಇಂಡಿಯಾ’ ಮೂಲಕ ಬರಮಾಡಿಕೊಂಡು ಪುಷ್ಪ ನೀಡಿ ಸ್ವಾಗತಿಸಿದರು. ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಶಾ ಮುಕ್ತ ಭಾರತ ಅಭಿಯಾನದ ಉದ್ದೇಶ, ಪ್ರತಿಯೊಬ್ಬ ನಾಗರಿಕನಿಗೂ ಇರಬೇಕಾದ ಕಾನೂನಿನ ಅರಿವಿನ ಮಹತ್ವ, ಮಾದಕ ಸೇವನೆಯ ದುಷ್ಪರಿಣಾಮ ಹಾಗೂ ಅದಕ್ಕೆ ಸಂಬಂಧಿಸಿದ ಕಾನೂನಾತ್ಮಕ ಕಠಿಣ ಶಿಕ್ಷೆಗಳನ್ನು ವಿವರಿಸಿದರು. ಸಂಸ್ಕಾರಯುತ ಶಿಕ್ಷಣವು, ವ್ಯಸನದಿಂದ ಮುಕ್ತರಾಗಲು ಇರುವ ಸರಿಯಾದ ಮಾರ್ಗವೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿಗಳಿಂದ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸುವ ಕಿರು ಪ್ರದರ್ಶನ ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಶ್ರೀ ಜಯಶೀಲ್ ಕುಮಾರ್, ಕಮ್ಯುನಿಟಿ ಸರ್ವಿಸ್ ಕ್ಲಬ್ ನ ಸಂಯೋಜಕರಾದ ಶ್ರೀಮತಿ ಶಿಲ್ಪಶ್ರೀ, ಯೋಗ ಮತ್ತು ಆಧ್ಯಾತ್ಮಿಕ ಸಂಘದ ಸಂಯೋಜಕರಾದ ಶ್ರೀಮತಿ ರಕ್ಷಾ ಮತ್ತು ಕು. ಅಂಕಿತಾ, ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಥಮ ಬಿಬಿಎ ವಿದ್ಯಾರ್ಥಿನಿ ದಿಶಾ ನಿರೂಪಿಸಿದರು.

