ಉಡುಪಿ : ಭಾರತದಲ್ಲಿ 23 ವರ್ಷಗಳ ಬಳಿಕ ದೇಶದಾದ್ಯಂತ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ನಡೆಸಲು ಚುನಾವಣಾ ಆಯೋಗ ಮುಂದಾಗಿದೆ. ಈ ಪ್ರಕ್ರಿಯೆ ಅನರ್ಹ ಹಾಗೂ ಅಕ್ರಮ ಮತದಾರರ ಹೆಸರನ್ನು ಮತದಾರ ಪಟ್ಟಿಯಿಂದ ರದ್ದು ಮಾಡಿ, ಪಾರದರ್ಶಕ ಚುನಾವಣೆಯ ಮೂಲಕ ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವ ಅಕ್ರಮ ವಲಸಿಗರನ್ನು ಮಟ್ಟ ಹಾಕಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಶಕ್ತಿ ತುಂಬಲು ಸಹಕಾರಿಯಾಗಲಿದೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಅವರು ಉಡುಪಿ ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆದ ಉಡುಪಿ ವಿಧಾನಸಭಾ ಕ್ಷೇತ್ರದ ಬಿಎಲ್ಎ 2 ಪ್ರತಿನಿಧಿಗಳ ಕಾರ್ಯಗಾರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ 2022ರ ಬಳಿಕ ಇದೀಗ ಚುನಾವಣಾ ಆಯೋಗ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ಜಾರಿಗೊಳಿಸುತ್ತಿದ್ದು, ಈ ನಿಯಮದನ್ವಯ ಚುನಾವಣಾ ಪೂರ್ವದಲ್ಲಿ ಪ್ರತಿಯೊಬ್ಬ ಅರ್ಹ ಮತದಾರದ ಹೆಸರನ್ನು ನಿಗದಿತ ದಾಖಲೆಗಳೊಂದಿಗೆ ಮರು ನೊಂದಾಯಿಸುವ ಪ್ರಕ್ರಿಯೆ ನಡೆಯಲಿದೆ. ಈ ಕುರಿತು ಕಾರ್ಯಾಗಾರದಲ್ಲಿ ನೀಡುವ ಉಪಯುಕ್ತ ಮಾಹಿತಿಯನ್ನು ಪ್ರತೀ ಮನೆಗಳಿಗೆ ತಲುಪಿಸುವ ಜೊತೆಗೆ ಆಯಾ ಪ್ರದೇಶದ ಬಿಎಲ್ಒ ಗಳ ಜೊತೆ ಸಮನ್ವಯತೆಯೊಂದಿಗೆ ಎಲ್ಲ ಅರ್ಹ ಮತದಾರರ ಹೆಸರು ಸೇರ್ಪಡೆಗೆ ಬಿಎಲ್ಎ 2 ಪ್ರತಿನಿಧಿಗಳು ಬದ್ಧತೆಯಿಂದ ಶ್ರಮಿಸಬೇಕು ಎಂದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ವಿಧಾನ ಪರಿಷತ್ ಸದಸ್ಯ ಡಾ! ಧನಂಜಯ ಸರ್ಜಿ ಅವರು ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಕುರಿತು ವಿಸ್ತ್ರತ ಮಾಹಿತಿ ನೀಡಿ, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯ ಪೌರನೂ ಮತದಾನದ ಹಕ್ಕನ್ನು ಹೊಂದಿದ್ದು, ಅಧಿಕೃತ ದಾಖಲೆಗಳೊಂದಿಗೆ ಮತದಾರ ಪಟ್ಟಿಯಲ್ಲಿ ಹೆಸರನ್ನು ಮರು ನೊಂದಾವಣೆಗೊಳಿಸಬೇಕು. ಈ ಅಭಿಯಾನದಲ್ಲಿ ಬಿಎಲ್ಎ2ಗಳ ಜವಾಬ್ದಾರಿ ಮಹತ್ವಪೂರ್ಣ ಎಂದು ತಿಳಿಸಿದರು.
ಬಿಜೆಪಿ ಉಡುಪಿ ನಗರ ಅಧ್ಯಕ್ಷ ದಿನೇಶ್ ಅಮೀನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಉಡುಪಿ ನಗರ ಮಂಡಲ ಉಸ್ತುವಾರಿ ದಿನಕರ ಶೆಟ್ಟಿ ಹೆರ್ಗ, ಉಡುಪಿ ಗ್ರಾಮಾಂತರ ಮಂಡಲ ಉಸ್ತುವಾರಿ ರೇಷ್ಮಾ ಉದಯ ಶೆಟ್ಟಿ, ಉಡುಪಿ ಗ್ರಾಮಾಂತರ ಮಂಡಲ ಪ್ರಭಾರಿ ಕಿರಣ್ ಕುಮಾರ್ ಬೈಲೂರು, ಉಡುಪಿ ವಿಧಾನಸಭಾ ಕ್ಷೇತ್ರದ ಬಿಎಲ್ಎ1 ಜಗದೀಶ್ ಆಚಾರ್ಯ ಕಪ್ಪೆಟ್ಟು ಸಹಿತ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಎಲ್ಎ2ಗಳು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಬಿಜೆಪಿ ಉಡುಪಿ ಗ್ರಾಮಾಂತರ ಅಧ್ಯಕ್ಷ ರಾಜೀವ ಕುಲಾಲ್ ಸ್ವಾಗತಿಸಿ, ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಮನೋಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಿ. ಶೆಟ್ಟಿ ವಂದಿಸಿದರು.

