ಕುಂದಾಪುರ : ಧರ್ಮದ ಮತ್ತು ಧಾರ್ಮಿಕ ಜೀವನದ ಪ್ರಾಮುಖ್ಯತೆಯನ್ನು ಭಗವಂತನು ಶ್ರೀರಾಮನ ಅವತಾರದಲ್ಲಿ ಉಪದೇಶ ಮಾಡಿದ್ದಾನೆ. ಭಗವಂತನ ಒಂದೊಂದು ಅವತಾರಕ್ಕೂ ತನ್ನದೇ ಆದ ವೈಶಿಷ್ಟ್ಯತೆ ಇದೆ. ಈ ಎಲ್ಲಾ ಅವತಾರಗಳ ಮೂಲ ಉದ್ದೇಶ ಧರ್ಮೋದ್ಧಾರ ಹಾಗೂ ಧರ್ಮದ ರಕ್ಷಣೆ. ಪ್ರತಿಯೊಂದು ಯುಗದಲ್ಲೂ ಧರ್ಮ ಸಂಸ್ಥಾಪನೆಗೆ ಭಗವಂತನು ವಿಶೇಷ ಅವತಾರ ತಾಳಿ ಧರ್ಮ ಸಂರಕ್ಷಣೆ ಮಾಡಿದ್ದಾನೆ ಎಂದು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಶ್ರೀಮದ್ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಹೇಳಿದರು
ಕುಂದಾಪುರದ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ನವೀಕೃತ ಶಿಲಾಮಯ ದ್ವಾರ ಮಂಟಪ ಹಾಗೂ ಶ್ರೀ ದೇವರ ಗರ್ಭಗುಡಿಯ ರಜತ ಕವಚ ಉದ್ಘಾಟಿಸಿ, ಆಶೀರ್ವಚನ ನೀಡಿ ಅವರು ಮಾತನಾಡಿದರು
ಪರಂಪರೆಯಾಗಿ ಬಂದಂತಹ ನಮ್ಮ ಧರ್ಮವನ್ನು ಆಚರಣೆ ಮಾಡಿ ನಮ್ಮ ಮಕ್ಕಳಿಗೆ ಧರ್ಮವನ್ನು ಉಪದೇಶ ಮಾಡಿ ಒಳ್ಳೆಯದು ಮಾಡಬೇಕು. ನಮ್ಮ ಸನಾತನ ಹಿಂದು ಧರ್ಮ ಸಂರಕ್ಷಣೆ ಮಾಡಿಕೊಳ್ಳುವುದು ಆಚರಣೆ ಮಾಡುವುದು ನಮ್ಮ ಕರ್ತವ್ಯ. ನಾವು ಒಳ್ಳೆಯ ಕೆಲಸವನ್ನು ಮಾಡಬೇಕು, ಧರ್ಮ ಮಾರ್ಗದಲ್ಲಿ ನಡೆಯಬೇಕು. ಪರಿಸ್ಥಿತಿಗನುಗುಣವಾಗಿ ಅದಕ್ಕೆ ತಕ್ಕಂತೆ ನಮ್ಮನ್ನು ನಾವು ತಯಾರು ಮಾಡಿಕೊಂಡು ನಮ್ಮ ಧರ್ಮ ಉದ್ಧಾರ, ಆಚರಣೆ ಮಾಡಿ ಸಂರಕ್ಷಣೆ ಮಾಡಿಕೊಳ್ಳಬೇಕಿದೆ ಎಂದು ಅವರು ನುಡಿದರು
ನಮ್ಮ ಹಿಂದು ಧರ್ಮವು ದೃಢವಾಗಿ ಸ್ಥಾಪನೆ, ಸಂಸ್ಥಾಪನೆಯಾಗಿ ಧರ್ಮಾಚರಣೆ ಮಾಡುತ್ತಿದ್ದಾರೆ ಅಂದರೆ ಅದಕ್ಕೆ ಕಾರಣ ಜಗದ್ಗುರು ಆದಿ ಶಂಕರಾಚಾರ್ಯರು. 1200 ವರ್ಷಗಳ ಹಿಂದೆ ಪವಿತ್ರವಾದ ಭಾರತ ದೇಶದಲ್ಲಿ ಅವತಾರ ಮಾಡಿದ್ದ ಅವರು, ಧರ್ಮ ಮಾರ್ಗವನ್ನು ಉಪದೇಶ ಮಾಡಿ ಹಿಂದು ಧರ್ಮವನ್ನು ಉದ್ಧಾರ ಮಾಡಿ, ದೀರ್ಘವಾದ ದೃಷ್ಟಿಯಿಂದ ಧರ್ಮವನ್ನು ಸಂಸ್ಥಾಪನೆ ಮಾಡಿದ್ದರು. ಸನಾತನ ಧರ್ಮದ ಅನುಯಾಯಿಗಳಲ್ಲಿ ಐಕಮತ್ಯ ಬರಬೇಕಾದರೆ ಶಂಕರಾಚಾರ್ಯರು ತೋರಿಸಿದ ಮಾರ್ಗದದಲ್ಲಿ ನಡೆಯಬೇಕು. ಅವರ ಅವತಾರವಾಗಿ 1200ವರ್ಷಗಳಾದರೂ ಸಹ ಅದೆಷ್ಟೋ ಜನರು ಈ ಧರ್ಮವನ್ನು ನಾಶಮಾಡಬೇಕೆಂದು ಎಷ್ಟು ಪ್ರಯತ್ನ ಮಾಡಿದರೂ ಸಹ ಈವತ್ತಿಗೂ ಈ ಧರ್ಮ ಇಷ್ಟು ದೃಢವಾಗಿದೆ ಎಂದರು.
ಕುಂದಾಪುರ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಕೆ.ಲಕ್ಷ್ಮೀಶ ಹವಾಲ್ದಾರ್ ದಂಪತಿಗಳು ಶ್ರೀಗಳ ಪಾದಪೂಜೆ ನೆರವೇರಿಸಿದರು. ಶೃಂಗೇರಿ ಶ್ರೀ ಶಾರದಾ ಪೀಠಂನ ಪ್ರಾಂತೀಯ ಧರ್ಮಾಧಿಕಾರಿ ಲೋಕೇಶ ಅಡಿಗ, ವಿಶ್ವರಾಮಕ್ಷತ್ರಿಯ ಸಂಘದ ಅಧ್ಯಕ್ಷ ಎಚ್.ಆರ್.ಶಶಿಧರ ನಾಯ್ಕ್, ಉದ್ಯಮಿ ದತ್ತಾನಂದ, ಉಪಾಧ್ಯಕ್ಷ ದೇವರಾಯ ಬಾಣ, ನಾಗಭೂಷಣ ಎಸ್., ದೇವಕಿ ಪಿ.ಸಣ್ಣಯ್ಯ, ರಾಧಾಕೃಷ್ಣ ಯು., ಶಂಕರ ಶೇರೆಗಾರ್, ಕೆ.ನಾಗರಾಜ ತಲ್ಲೂರು, ಕೆ.ಚಂದ್ರಶೇಖರ ನಾಯ್ಕ್, ಆನಂದ ರಾವ್ ಕೆರಾಡಿ
ಸಂಘದ ಸದಸ್ಯರು, ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ರಾಮಕ್ಷತ್ರಿಯ ಸಮಾಜದ ಹಿರಿಯರಾದ ಬಿಜೂರು ರಾಮಕೃಷ್ಣ ಶೇರುಗಾರ್ ಕೆ ಆರ್ ಉಮೇಶ್ ರಾವ್ ಚಂದ್ರಶೇಖರ್ ನಾಯ್ಕ್ ಸತೀಶ್ ಕಾವೇರಿ ಚಂದ್ರಶೇಖರ್ ಕಾವೇರಿ ಡಿ ಕೆ ಪ್ರಭಾಕರ್ ಉಪಸ್ಥಿತರಿದ್ದರು.
ಕೋಶಾಧಿಕಾರಿ ಡಿ. ಸತೀಶ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ನಾಗರಾಜ ನಾಯ್ಕ್ ವಂದಿಸಿದರು.

