ಬೆಂಗಳೂರು : ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಸಂಬಂಧ ಮಂಗಳೂರು ಪೊಲೀಸರ ಜೊತೆ ಕಾನೂನು- ಸುವ್ಯವಸ್ಥೆ ಸಭೆ ನಡೆಸಲು ಬಂದ ಗೃಹ ಸಚಿವ ಡಾ.ಜಿ.ಪರಮೇಶ್ವರ ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸುವ ಮೂಲಕ ಪ್ರಕರಣದ ಹಾದಿ ತಪ್ಪಿಸಲು ಮುಂದಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಆರೋಪಿಸಿದ್ದಾರೆ.
ಡಾ. ಪರಮೇಶ್ವರ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಕ್ಕೆ ಮುನ್ನ ಮುಸ್ಲಿಂ ಮುಖಂಡರ ಜೊತೆ ಸಭೆ ನಡೆಸಿದ್ದಾರೆ. ಮುಸ್ಲಿಂ ಮುಖಂಡರು ಮೇಜು ಗುದ್ದಿ ಸರ್ಕಾರಕ್ಕೆ ಧಮ್ಮಿ ಹಾಕಿದ್ದಾರೆ. ಸರ್ಕಾರದ ಮೇಲೆ ಸವಾರಿ ಮಾಡುವ ಹಂತಕ್ಕೆ ಇವರ ವರ್ತನೆ ತಲುಪಿದೆ. ಗೃಹ ಸಚಿವರು ಹಂತಕರ ರಾಗಕ್ಕೆ ತಾಳ ಹಾಕಲು ಹೊರಟಿದ್ದಾರೆ. ಗೃಹ ಇಲಾಖೆಯನ್ನು ಕರಾವಳಿಯ ಜಿಹಾದಿಗಳ ಕಾಲ ಬುಡದಲ್ಲಿ ಅಡವಿಡುತ್ತೀರಾ ? ಎಂದು ಸುನೀಲ್ ಪ್ರಶ್ನಿಸಿದ್ದಾರೆ.
ಆ್ಯಂಟಿ ಕಮ್ಯುನಲ್ ಫೋರ್ಸ್ ರಚನೆ ಮಾಡುವುದರ ಉದ್ದೇಶ ಸ್ಪಷ್ಟವಾಗಿದೆ. ಹಿಂದುತ್ವದ ಪರವಾಗಿರುವ ಧ್ವನಿಯನ್ನು ಪೊಲೀಸ್ ಬಲ ಬಳಸಿ ದಮನಿಸುವುದು ಸರ್ಕಾರದ ಉದ್ದೇಶವಾಗಿದೆ. ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸರ್ಕಾರ ಪ್ರಾರಂಭಿಸುವ ಆ್ಯಂಟಿ ಕಮ್ಯುನಲ್ ಫೋರ್ಸ್ ಹಿಂದುತ್ವದ ದಮನಕ್ಕೆ ಬಳಕೆಯಾಗಲಿದೆ. ಸರ್ಕಾರಕ್ಕೆ ಶಾಂತಿಯ ಬದಲು ಪಿಎಫ್ಐ ಉಗ್ರರ ಹಿತಾಸಕ್ತಿ ರಕ್ಷಣೆ ಮಾಡುವುದೇ ಆದ್ಯತೆಯಾಗಿದೆ ಎಂದು ಟೀಕಿಸಿದ್ದಾರೆ.

