ಸೆಪ್ಟೆಂಬರ್ 7ರಂದು ಸೋಮವಾರ ಬೆಳಿಗ್ಗೆ 8.30ಕ್ಕೆ ಕುಂದಾಪುರ ಹೊಸ ಬಸ್ ನಿಲ್ದಾಣದಿಂದ ಆರಂಭವಾಗಿ ಸಂಜೆ 5.00ಕ್ಕೆ ಸಾಸ್ತಾನದ ಬಸ್ ನಿಲ್ದಾಣದ ಬಳಿ ಸಮಾರೋಪಗೊಳ್ಳಲಿರುವ ‘ವಂದೇ ಮಾತರಂ ಜನಜಾಗೃತಿ ಅಭಿಯಾನ’ ಮತ್ತು ‘ಕಾಲ್ನಡಿಗೆ ಜಾಥಾ’ದ ಕರಪತ್ರವನ್ನು 98 ವರ್ಷದ ವಯೋವೃದ್ದ ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ವಿಠ್ಠಲ್ ಕಿಣಿಯವರು ಬಿಡುಗಡೆಗೊಳಿಸಿದರು.
ವಿಠ್ಠಲ್ ಕಿಣಿಯವರು ಮಂಗಳೂರಿನ ಮನೆಯಲ್ಲಿ ಮಾತನಾಡಿ, ‘ವಂದೇ ಮಾತರಂ ಎಂದರೆ ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟಿರುವ ರಾಷ್ಟ್ರ ಭಕ್ತರ ಮಂತ್ರ, ವಂದೇ ಮಾತರಂ ಹೆಸರಲ್ಲಿ ಜನಜಾಗೃತಿ ಅಭಿಯಾನ ಮಾಡುತ್ತಿರುವ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರ ಜೊತೆ ತಾನು ಕೂಡ ಪಾಲ್ಗೊಳ್ಳಲಿದ್ದೇನೆ. ಇಡೀ ದೇಶ ವಂದೇ ಮಾತರಂನ ಪರವಾಗಿ ಎದ್ದು ನಿಲ್ಲಬೇಕು. ವಂದೇ ಮಾತರಂ ಕುಂದಾಪುರದ ಕಾಲ್ನಡಿಗೆ ಜಾಥಾ ರಾಷ್ಟ್ರ ಭಕ್ತರೆಲ್ಲರ ನೆರವಿನಿಂದ ಒಂದು ಐತಿಹಾಸಿಕ ದಾಖಲೆಯಾಗಲಿ’ ಎಂದು ಹೇಳಿದರು.
ವಂದೇ ಮಾತರಂ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಸಂಸದ ಬ್ರಿಜೇಶ್ ಚೌಟ, ಪಕ್ಷದ ಮುಖಂಡರಾದ ರಮೇಶ್ ಕಂದೆಟ್ಟು, ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

