ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ( ಡಿಎಂಎಫ್ ) ಬೈಂದೂರು ಕ್ಷೇತ್ರಕ್ಕೆ ಹೆಚ್ಚು ಅನುದಾನ ಹಂಚಿಕೆ ಮಾಡಲು ಶಾಸಕ ಗುರುರಾಜ್ ಗಂಟಿಹೊಳೆ ಒತ್ತಾಯ
ಗಣಿಗಾರಿಕೆಯಿಂದ ಕ್ಷೇತ್ರದ ರಸ್ತೆ ಸಹಿತ ಇನ್ನಿತರ ಮೂಲ ಸೌಕರ್ಯಗಳ ಹಾನಿ ಸಂಬಂಧ ಬೈಂದೂರು ಕ್ಷೇತ್ರಕ್ಕೆ ಅನುದಾನ ಒದಗಿಸಲು ಆಗ್ರಹ
ಕ್ಷೇತ್ರವಾರು ಡಿಎಂಎಫ್ ಅನುದಾನ ಹಂಚಿಕೆ ಬಗ್ಗೆ ಕೇಳಿರುವ ಅಧಿವೇಶನ ಪ್ರಶ್ನೆಗೆ ಅಸಮರ್ಪಕ ಉತ್ತರ ಒದಗಿಸಿದ ಅಧಿಕಾರಿಗಳು!!!
ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ಮ ಳೆಗಾಲದ ಅಧಿವೇಶನದಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆಯವರು ಉಡುಪಿ ಜಿಲ್ಲೆಯಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ( ಡಿಎಂಎಫ್ ) ಯಡಿ 2023-24 ರಿಂದ 2026-27 ನೇ ಸಾಲಿನಲ್ಲಿ ಈವರೆಗೆ ಸಂಗ್ರಹಗೊಂಡ ಮೊತ್ತ ಹಾಗೂ ಸದರಿ ಮೊತ್ತವನ್ನು ನಿಯಮಾನುಸಾರ ವಿವಿಧ ಉದ್ದೇಶಗಳಿಗೆ ವಿಧಾನಸಭಾ ಕ್ಷೇತ್ರವಾರು ಖರ್ಚು ಮಾಡಿರುವ ಬಗ್ಗೆ ಕೇಳಿರುವ ಚುಕ್ಕೆ ರಹಿತ ಪ್ರಶ್ನೆಗೆ ಉತ್ತರಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ರವರು ಉಡುಪಿ ಜಿಲ್ಲೆಯಲ್ಲಿ ಡಿಎಂಎಫ್ ಅಡಿಯಲ್ಲಿ ಈವರೆಗೆ ಒಟ್ಟು ರೂ. 13.25 ಕೋಟಿಗಳು ವಿವಿಧ ಉದ್ದೇಶಗಳಿಗೆ ಅನುಮೋದನೆಗೊಂಡಿರುತ್ತದೆ.ಇದರಲ್ಲಿ ಒಟ್ಟು ರೂ. 8.23 ಕೋಟಿಗಳನ್ನು ಖರ್ಚು ಮಾಡಲಾಗಿರುತ್ತದೆ. ಎಂದು ಉತ್ತರಿಸಿರುತ್ತಾರೆ
ಡಿಎಂಎಫ್ ಅನುದಾನ ಹಂಚಿಕೆ ಬೈಂದೂರು ಕ್ಷೇತ್ರಕ್ಕೆ ಅನ್ಯಾಯ, ಅಧಿವೇಶನ ಪ್ರಶ್ನೆಗೆ ಅಧಿಕಾರಿಗಳಿಂದ ಅಸಮರ್ಪಕ ಮಾಹಿತಿ ಪೂರೈಕೆ :
ಬೈಂದೂರು ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಕಲ್ಲುಗಣಿಗಾರಿಕೆ ಹಾಗೂ ಮರಳು ಗಣಿಗಾರಿಕೆ ನಡೆಯುತ್ತಿದ್ದರೂ ಡಿಎಂಎಫ್ ನಡಿ ಸಂಗ್ರಹಗೊಂಡ ಮೊತ್ತದಲ್ಲಿ ಕ್ಷೇತ್ರದ ಹಾಳಾಗಿರುವ ರಸ್ತೆಗಳ ಅಭಿವೃದ್ಧಿಗೆ ವ್ಯಯಿಸಲು ಈ ಹಿಂದೆ ಪ್ರತಿ ಸಭೆಯಲ್ಲೂ ಹಾಗೂ ಡಿಎಂಎಫ್ ಸಮಿತಿ ಅಧ್ಯಕ್ಷರಾದ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಮಾಡಿದ್ದರೂ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಿರುವ ಬಗ್ಗೆ ವರದಿ ನೀಡಲಾಗಿದೆ.ಆದರೆ ಅದರಲ್ಲಿ ಬೈಂದೂರು ಕ್ಷೇತ್ರಕ್ಕೆ ನೀಡಿರುವ ಅನುದಾನದ ಪ್ರಸ್ತಾಪ ಇಲ್ಲ! ಈ ಬಗ್ಗೆ ವಿಧಾನ ಸಭಾ ಕ್ಷೇತ್ರವಾರು ಖರ್ಚು ಮಾಡಿರುವ ಅನುದಾನದ ಮಾಹಿತಿಯನ್ನು ಅಧಿವೇಶನದಲ್ಲಿ ಪ್ರಶ್ನಿಸಿದರೆ ಒಟ್ಟು 8. 23 ಕೋಟಿ ಖರ್ಚು ಮಾಡಿರುವ ಮಾಹಿತಿ ನೀಡಿದ್ದರೂ ವಿಧಾನ ಸಭಾ ಕ್ಷೇತ್ರವಾರು ಅನುದಾನ ಹಂಚಿಕೆ ಬಗ್ಗೆ ಉತ್ತರಿಸದೇ ಅಧಿಕಾರಿಗಳು ಅಸಮರ್ಪಕ ಮಾಹಿತಿ ಒದಗಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಗಣಿಗಾರಿಕೆಯಿಂದ ಹಾಳಾಗಿರುವ ರಸ್ತೆಗಳು ಸಹಿತ ಇನ್ನಿತರ ಮೂಲ ಸೌಕರ್ಯ ಉದ್ದೇಶಗಳಿಗೆ ಅನುದಾನ ಒದಗಿಸಲು ಆಗ್ರಹ :
ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಡಿಎಂಎಫ್ ನಿಧಿಯಡಿ ಖರ್ಚಾಗಿರುವ ಎಲ್ಲಾ ಮೊತ್ತಗಳನ್ನು ನಿಯಮಾನುಸಾರ ಡಿಎಂಎಫ್ ಸಮಿತಿಯ ಮುಂದೆ ಮಂಡಿಸಿ ಎಲ್ಲಾ ಕಾಮಗಾರಿಗಳಿಗೂ ವಿಧಾನ ಸಭಾ ಕ್ಷೇತ್ರವಾರು ಅನುಮೋದನೆ ಪಡೆದಿರುವ ಬಗ್ಗೆ ಸಮರ್ಪಕ ಮಾಹಿತಿ ನೀಡುವುದರೊಂದಿಗೆ ಡಿಎಂಎಫ್ ಅನುದಾನ ಹಂಚಿಕೆಯಲ್ಲಿ ಬೈಂದೂರು ಕ್ಷೇತ್ರಕ್ಕೆ ಆಗಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಲು ಶಾಸಕರು ಆಗ್ರಹಿಸಿದ್ದಾರೆ. ಇಲ್ಲವಾದರೆ ಇಲಾಖೆಯ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿರುತ್ತಾರೆ.

