ಕುಂದಾಪುರ : ನಗರ ಸಮೀಪದ ಹಂಗಳೂರಿನಲ್ಲಿ ಸ್ಕೂಟರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ನಡೆದಿದೆ
ಹಂಗಳೂರಿನ ರಾಷ್ಟ್ರೀಯ ಹೆದ್ದಾರಿ 66ರ ದುರ್ಗಾಂಬಾ ಬಸ್ ಡಿಪೋ ಎದುರುಗಡೆಯಲ್ಲಿ ಕಾರು ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ ನಡೆದಿದ್ದು ಅಪಘಾತದಲ್ಲಿ ಮೀನು ವ್ಯಾಪಾರದ ಸ್ಕೂಟರ್ ನಲ್ಲಿದ್ದ ಸವಾರ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ
ಕಾರಿನಲ್ಲಿ ಸಾಸ್ತಾನ ಮೂಲದವರೆನ್ನಲಾದ ಅಪ್ರಾಪ್ತ ಯುವಕರಂತೆ ಕಾಣುತ್ತಿದ್ದ ಐದು ಜನ ಯುವಕರ ಪೈಕಿ ನಾಲ್ಕು ಜನ ಕಾರಿನಿಂದ ಓಡಿ ತಪ್ಪಿಸಿಕೊಂಡಿದ್ದಾರೆ. ಒಬ್ಬ ಕಾರಿನೊಳಗೆ ಸಿಲುಕಿದ್ದ ಪರಿಣಾಮ ಸಾರ್ವಜನಿಕರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ.
ಮೀನು ವ್ಯಾಪಾರಿಯೆನ್ನಲಾದ ಸ್ಕೂಟರ್ ಸವಾರ ಕೋಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದರು. ಇದೇ ವೇಳೆ ಹಿಂದಿನಿಂದ ಅತೀ ವೇಗವಾಗಿ ಬಂದ ಕಾರು ಬ್ಯಾರಿಕೇಡ್ ಮಧ್ಯದಲ್ಲಿ ನುಗ್ಗಿದಾಗ ಚಾಲಕನ ನಿಯಂತ್ರಣ ತಪ್ಪಿ ಎದುರುಗಡೆ ಹೋಗುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟ ಸ್ಕೂಟರ್ ಸವಾರ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆ ಸೇರಿದ್ದಾರೆ.
ಅಪಘಾತದ ತೀವ್ರತೆಗೆ ಕಾರು ನಾಲ್ಕು ಸುತ್ತು ಪಲ್ಟಿಯಾಗಿ ಮೇಲ್ಮುಖವಾಗಿ ಡಿವೈಡರ್ಗೆ ತಾಗಿ ಬಿದ್ದಿದೆ. ಸ್ಕೂಟರ್ ಮುಂಭಾಗ ನುಜ್ಜುಗುಜ್ಜಾಗಿದೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

