ಬೆಳ್ತಂಗಡಿ : ಉಜಿರೆ ಸಮೀಪದ ಮನೆಯಲ್ಲಿ ಗುರುವಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಮಾಡುವ ವೇಳೆ ಬ್ರಹ್ಮಾವರ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಗಿರೀಶ್ ಮಟ್ಟಣ್ಣವರ್ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ತಿಮರೋಡಿ ಅವಹೇಳನಕಾರಿ ಹೇಳಿಕೆ ನೀಡಿದ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಆ.18ರಂದು ಪ್ರಕರಣ ದಾಖಲಾಗಿತ್ತು. ಆ.21ರಂದು ಠಾಣೆಗೆ ಹಾಜರಾಗಲು ತಿಮರೋಡಿಗೆ ನೋಟಿಸ್ ನೀಡಿ ದ್ದರೂ ಹಾಜರಾಗಿರಲಿಲ್ಲ.
ಹಾಗಾಗಿ ಗುರುವಾರ ಬೆಳಗ್ಗೆ ಉಜಿರೆಯಲ್ಲಿರುವ ತಿಮರೋಡಿ ಮನೆಗೆ ಬ್ರಹ್ಮಾವರ ಪೊಲೀಸರು ಬಂಧನ ಮಾಡಲು ಬಂದಾಗ ಮಟ್ಟಣ್ಣವರ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಆ.21ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಸಬ್ ಇನ್ಸೆಕ್ಟರ್ ಅಶೋಕ್ ಮಲಬಾಗಿಲು ದೂರು ನೀಡಿದ್ದು, ತಿಮರೋಡಿ, ಮಟ್ಟಣ್ಣ ವರ್, ಜಯಂತ್ ಟಿ. ಹಾಗೂ ಇತರ 10-15 ಮಂದಿ ಕರ್ತವ್ಯ ನಿರ್ವಹಿಸದಂತೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ

