ಮಂಗಳೂರು : ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತಕ್ಕೆ ಸಂಬಂಧಿಸಿದಂತೆ ಕಾರನ್ನು ಬಿಡಿಸಿಕೊಳ್ಳಲು ಲಂಚದ ಬೇಡಿಕೆ ಇಟ್ಟ ‘ಹೆಡ್ ಕಾನ್ಸ್ಟೇಬಲ್ ತಸ್ಲಿಂ ಎಂಬವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ದೂರುದಾರರ ಕಾರು ಮತ್ತು ಸ್ಕೂಟರ್ ಮದ್ಯೆ ನಂತೂರು ಸರ್ಕಲ್ನಲ್ಲಿ ಅಪಘಾತ ಆಗಿದ್ದು, ಈ ಕುಂತು ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲಿಂ ಕಾರಿನ ದಾಖಲಾತಿಗಳನ್ನು ಪೊಲೀಸ್ ಠಾಣೆಗೆ ತಂದು ಕೊಡುವಂತೆ ತಿಳಿಸಿದಂತೆ ಕಾರಿನ ಮಾಲಕ ದಾಖಲಾತಿಗಳನ್ನು ಪೊಲೀಸ್ ಠಾಣೆಗೆ ನೀಡಿದ್ದರು.
ಆದರೆ ಬಳಿಕ ಕಾರು ಬಿಡಿಸಿಕೊಳ್ಳಲು 50 ಸಾವಿರ ಲಂಚ ನೀಡುವಂತೆ ತಸ್ಲಿಂ ಒತ್ತಾಯಿಸಿದ್ದರು ಎನ್ನಲಾಗಿದೆ. ಸತತವಾಗಿ ಹಣಕ್ಕಾಗಿ ಸತಾಯಿಸಿದ ಹಿನ್ನೆಲೆಯಲ್ಲಿ ದೂರುದಾರರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಗುರುವಾರ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಲಂಚದ ಐದು ಸಾವಿರ ಹಣ ಪಡೆಯುತ್ತಿದ್ದಾಗ ವಶಕ್ಕೆ ಪಡೆದುಕೊಂಡಿದ್ದಾರೆ.

