ಮಂಗಳೂರು : ರಾಜ್ಯದ ಗಮನ ಸೆಳೆದ ಉಳ್ಳಾಲದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಲೂಟಿಯಾದ ಒಟ್ಟು 18.67 ಕೆಜಿ ಚಿನ್ನಾಭರಣಗಳ ಪೈಕಿ 18.314 ಕೆಜಿ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆಯುವುದರೊಂದಿಗೆ ಬಹುತೇಕ ಚಿನ್ನಾಭರಣ ಮರಳಿದ್ದು ಬ್ಯಾಂಕಿನ 1600ರಷ್ಟು ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ
ಲೂಟಿ ಮಾಡಿದ 11,67,044 ರು. ನಗದು ಪೈಕಿ 3,80,500 ರು. ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಈಗಾಗಲೇ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಪ್ರಮುಖ ಆರೋಪಿಗಳಿಗೆ ಬ್ಯಾಂಕಿನ ಕುರಿತು ಮಾಹಿತಿ ಮತ್ತು ಸಹಕಾರ ನೀಡಿದ ಸ್ಥಳೀಯ ವ್ಯಕ್ತಿ ಸೇರಿದಂತೆ ಇನ್ನೂ ನಾಲ್ವರು ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ. ಎಲ್ಲ ಆರೋಪಿಗಳ ಬಂಧನದ ಬಳಿಕವಷ್ಟೇ ಉಳಿದ ಕೇವಲ 200 ಗ್ರಾಂನಷ್ಟು ಚಿನ್ನ ಮತ್ತು ಉಳಿಕೆ ನಗದು ಹಣ ಪತ್ತೆ ಹಚ್ಚಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಸ್ತುತ ಆರೋಪಿಗಳು ಪೊಲೀಸರ ವಶದಲ್ಲಿದ್ದು ವಿಚಾರಣೆ ತೀವ್ರಗೊಳಿಸಲಾಗಿದೆ

