Home » ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ
 

ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ

by Kundapur Xpress
Spread the love

ಕುಂದಾಪುರದ : ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ 2026–27ನೇ ಶೈಕ್ಷಣಿಕ ವರ್ಷಕ್ಕೆ ನೂತನವಾಗಿ ಸೇರ್ಪಡೆಗೊಂಡ ಪ್ರಥಮ ಬಿ.ಕಾಂ. ಜೊತೆ ಸಿಎ, ಸಿಎಸ್, ಸಿಎಂಎ ಅಧ್ಯಯನ ನಡೆಸಲಿರುವ ವಿದ್ಯಾರ್ಥಿಗಳಿಗಾಗಿ ಓರಿಯೆಂಟೇಶನ್ ಕಾರ್ಯಕ್ರಮ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ  ನಡೆಯಿತು.
ಮುಖ್ಯ ಅತಿಥಿ ಉಡುಪಿಯ ವಿ-ರೀಚ್ ಅಕಾಡೆಮಿಯ ಸಂಸ್ಥಾಪಕರಾದ ಸಿಎಸ್ ಸಂತೋಷ್ ಪ್ರಭು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸ್ಪಷ್ಟವಾಗಿ ನಿಗಧಿಪಡಿಸಿ, ದೃಢಸಂಕಲ್ಪ ಮತ್ತು ಶ್ರಮದ ಮೂಲಕ ಸಾಧನೆಯತ್ತ ಮುನ್ನಡೆಯಬೇಕು. ಪರಿಶ್ರಮ, ಸಮಯ ನಿರ್ವಹಣೆ, ದೃಢ ಸಂಕಲ್ಪ ಯಶಸ್ಸಿನ ಮೂಲ ಮಂತ್ರ ಎಂದರು. ಇದೇ ಸಂದರ್ಭ ಅವರು ಭವಿಷ್ಯದ ದಿನಗಳಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಹ ಸಿಎ, ಸಿಎಸ್, ಸಿಎಂಎ ಮುಂತಾದ ವೃತ್ತಿಪರ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡಿದವರಿಗೆ ಉದ್ಯೋಗಾವಕಾಶಗಳು ಲಭಿಸಲಿದ್ದು, ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಉಪ-ಪ್ರಾಂಶುಪಾಲರ ಡಾ. ಚೇತನ್ ಶೆಟ್ಟಿ ಕೋವಾಡಿ ಅವರು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಪೋಷಕರಿಗೆ, ಸಮಾಜಕ್ಕೆ ಹಾಗೂ ಸಂಸ್ಥೆಗೆ ಹೆಮ್ಮೆ ತರುವಂತಹ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಪ್ರೇರೇಪಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ವಿ–ರೀಚ್ ಅಕಾಡೆಮಿಯ ಸಂಯೋಜಕ ಶ್ರೀ ನಾಗೇಶ್ ಶೆಣೈ, ಕಾಲೇಜಿನ ಸಿಎ, ಸಿಎಸ್, ಸಿಎಂಎ ಕೋರ್ಸ್‌ಗಳ ಸಂಯೋಜಕರಾದ ಶ್ರೀ ಸತೀಶ್ ಕಾಂಚನ್ ಹಾಗೂ ಶ್ರೀ ಕಿಶೋರ್‌ಕೃಷ್ಣ ಮರಕಾಲ ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವೀಣಾ ವಿ. ಭಟ್ ಸ್ವಾಗತಿಸಿ, ಪ್ರಸ್ತಾವಿಸಿದರು. ವಿದ್ಯಾರ್ಥಿಗಳಾದ ವರ್ಷಾ ಪ್ರಾರ್ಥಿಸಿ, ಸುರಕ್ಷಾ ವಂದಿಸಿ, ಲಾವಣ್ಯ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

 

Related Articles

error: Content is protected !!