ಹೊಸದಿಲ್ಲಿ : ದೇಶದಲ್ಲಿ ಇಂಗ್ಲಿಷ್ ಮಾತನಾಡುವವರು ಶೀಘ್ರದಲ್ಲೇ ನಾಚಿಕೆ ಪಡುವ ಸನ್ನಿವೇಶ ಸೃಷ್ಟಿಯಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಭಾರತದ ಭಾಷೆಗಳು ನಮ್ಮ ಸಂಸ್ಕೃತಿಯ ರತ್ನಗಳು. ಈ ಭಾಷೆಗಳಿಲ್ಲದೆ, ನಾವು ನಿಜವಾದ ಭಾರತೀಯರಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಐಎಎಸ್ ಅಧಿಕಾರಿ ಅಶುತೋಷ್ ಅಗ್ನಿಹೋತ್ರಿ ಅವರ ಮೈ ಬೂಂದ್ ಸ್ವಯಂ, ಖುದ್ ಸಾಗರ್ ಹೂನ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ, ಸ್ಥಳೀಯ ಭಾಷೆಗಳು ಭಾರತದ ಅಸ್ಮಿತೆಯ ಕೇಂದ್ರ ಬಿಂದುಗಳು. ಅವು ವಿದೇಶಿ ಭಾಷೆಗಳಿಗಿಂತ ಹೆಚ್ಚಿನ ಆದ್ಯತೆ ಪಡೆಯಬೇಕು ಎಂದರು. ಭಾರತದ ಭಾಷಾ ಪರಂಪರೆಯನ್ನು ಮರಳಿ ಪಡೆಯಲು ದೇಶಾದ್ಯಂತ ಹೊಸ ಪ್ರಯತ್ನ ನಡೆಯಬೇಕು. ಪ್ರಪಂಚದಾದ್ಯಂತ ವಸಾಹತುಶಾಹಿ ಗುಲಾಮಗಿರಿಯ ಸಂಕೇತವಾಗಿ ಇಂಗ್ಲಿಷ್ ಅನ್ನು ತಿರಸ್ಕರಿಸುವ ದಿನಗಳು ದೂರವಿಲ್ಲ ಎಂದು ಶಾ ಭವಿಷ್ಯ ನುಡಿದಿದ್ದಾರೆ.
ಇದೊಂದು ಕಠಿಣ ಯುದ್ಧ ಎಂದು ಒಪ್ಪಿಕೊಂಡ ಅವರು, ಭಾರತೀಯ ಸಮಾಜ ಅದನ್ನು ಗೆಲ್ಲುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು. ಮತ್ತೊಮ್ಮೆ ಆತ್ಮಗೌರವದಿಂದ, ಭಾರತೀಯರು ನಮ್ಮ ದೇಶವನ್ನು ನಮ್ಮ ಸ್ವಂತ ಭಾಷೆಗಳಲ್ಲಿ ಆಳುತ್ತಾರೆ, ಜಗತ್ತನ್ನು ಮುನ್ನಡೆಸುತ್ತಾರೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದರು

