ಹೊಸದಿಲ್ಲಿ: ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾದ ಬಳಿಕ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರ ಬರ್ಬರ ಹತ್ಯೆ ನಡೆದಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಭಾನುವಾರ ತರಾಟೆಗೆತ್ತಿಕೊಂಡಿದ್ದಾರೆ.
ಕೊಲ್ಕತಾದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿ ಅನೇಕ ವರ್ಷಗಳ ಕಾಲ ಬಂಗಾಲವನ್ನು ಕಮ್ಯುನಿಸ್ಟರು ಆಳಿದರು. ಅವರ ಬಳಿಕ ಮಮತಾ ಬ್ಯಾನರ್ಜಿ ಅವರು ‘ಮಾ, ಮಾಟಿ, ಮಾನುಷ್’ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದರು. ಆದರೆ ಅವರು ಬಂಗಾಲದ ಮಹಾನ್ ನೆಲವನ್ನು ನುಸುಳುಕೋರರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಕೋರರ ಭೂಮಿಯನ್ನಾಗಿ ಮಾರ್ಪಡಿಸಿದರು. ಅಪರಾಧ, ಬಾಂಬ್ ಸ್ಫೋಟಗಳು ಮತ್ತು ಹಿಂದುಗಳ ವಿರುದ್ಧ ದಮನ ನೀತಿ ಅನುಸರಿಸುವ ಆಡಳಿತ ನೀಡಿದರು. ನೂರಾರು ಬಿಜೆಪಿ ಕಾರ್ಯಕರ್ತರ ಹತ್ಯೆಗಳು ನಡೆದವು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದೀದಿಯವರೇ, ಈಗ ನಿಮ್ಮ ದುರಾಡಳಿತದ ಸಮಯವೂ ಅಂತ್ಯಗೊಳ್ಳುತ್ತಾ ಬಂತು 2026ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಆದರೆ ನನ್ನ ಸವಾಲೆಂದರೆ, ದೀದಿಯವರೇ (ಮಮತಾ ಬ್ಯಾನರ್ಜಿ) ನಿಮಗೆ ಧೈರ್ಯವಿದ್ದರೆ ಹಿಂಸೆಯಿಲ್ಲದೆ ಚುನಾವಣೆಗೆ ಸ್ಪರ್ಧಿಸಿ, ನಿಮ್ಮ ಠೇವಣಿ ಕೂಡ ನಷ್ಟವಾಗಲಿದೆ ಎಂದು ಅಮಿತ್ ಶಾ ನುಡಿದರು.
ಇದಕ್ಕೂ ಮುನ್ನ ಅಮಿತ್ ಶಾ ಅವರು, ಕೋಲ್ಕತಾ ನಗರದ ಹೊರವಲಯದಲ್ಲಿರುವ ರಾಜರ್ಹ್ಯಾಟ್ ನಲ್ಲಿ ಹೊಸದಾಗಿ ನಿರ್ಮಾಣಗೊಂಡು ಸೆಂಟ್ರಲ್ ಫೊರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ(ಸಿಎಫ್ಎಸ್ ಎಲ್)ಯನ್ನು ಉದ್ಘಾಟಿಸಿದರು. ಇದು ಪೂರ್ವ ಮತ್ತು ಈಶಾನ್ಯ ಪ್ರದೇಶಗಳಲ್ಲಿನ ಸಂಕೀರ್ಣ ಅಪರಾಧ ಪ್ರಕರಣಗಳ ತನಿಖೆಗೆ ಸಮಗ್ರ ನೆಲೆಯಲ್ಲಿ ನೆರವಾಗಲಿದೆ ಎಂದು ಅವರು ಪ್ರಕಟಿಸಿದರು. ಅಮಿತ್ ಶಾ ಅವರು ಎರಡು ದಿನ ಗಳ ಬಂಗಾಲ ಪ್ರವಾಸ ಕೈಗೊಂಡಿದ್ದಾರೆ.

