ಭಾರತವೇ ಗೆಲ್ಲಲಿ ನಮ್ಮ ಹಾರೈಕೆ
ದುಬೈ (ಯುಎಇ) : ಮೂರು ವಾರಗಳ ವಾರಗಳ ಕಾಲ ವಿಶ್ವದೆಲ್ಲೆಡೆಯ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿ, ರೋಚಕ ಕ್ಷಣಗಳ ಮೂಲಕ ತುದಿಗಾಲಲ್ಲಿ ನಿಲ್ಲಿಸುವಂತೆ ಮಾಡಿದ 9ನೇ ಆವೃತ್ತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಈಗ ನಿರ್ಣಾಯಕ ಘಟ್ಟ ತಲುಪಿದೆ, ಬಿಸಿಸಿಐ, ಪಿಸಿಬಿ ನಡುವೆ ಭಾರೀ ಸಂಘರ್ಷಕ್ಕೆ ಕಾರಣವಾಗಿ ಬಳಿಕ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿರುವ ಟೂರ್ನಿಯ ಫೈನಲ್ ಪಂದ್ಯಕ್ಕೆ ದುಬೈನಲ್ಲಿ ವೇದಿಕೆ ಸಜ್ಜುಗೊಂಡಿದೆ. ಭಾನುವಾರ ನಡೆಯಲಿರುವ ಬಹುನಿರೀಕ್ಷಿತ ಫೈನಲ್ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಟ್ರೋಫಿಗಾಗಿ ಪರಸ್ಪರ ಸೆಣಸಾಡಲಿವೆ.
ಕಪ್ ಗೆಲ್ಲುವ ಫೇವರಿಟ್ ಎಂದೇ ಕರೆಸಿಕೊಂಡು ಟೂರ್ನಿಗೆ ಕಾಲಿಟ್ಟಿರುವ ಟೀಂ ಇಂಡಿಯಾ, ಸತತ 3ನೇ ಹಾಗೂ ಒಟ್ಟಾರೆ 5ನೇ ಬಾರಿ ಚಾಂಪಿಯನ್ಸ್ ಟ್ರೋಫಿ ಫೈನಲ್ಗೇರಿದೆ. ನ್ಯೂಜಿಲೆಂಡ್ನ ಫೈನಲ್ ಪ್ರವೇಶ ಕೂಡಾ ಅಚ್ಚರಿಯದ್ದೇನಲ್ಲ. ಯಾವುದೇ ಬಲಿಷ್ಠ ತಂಡವನ್ನು ಸೋಲಿಸಬಲ್ಲ ಸಾಮರ್ಥ ಹೊಂದಿರುವ ಕಿವೀಸ್ ಪಡೆ, ಟೂರ್ನಿಯ ಇತಿಹಾಸದಲ್ಲಿ 3ನೇ ಬಾರಿ ಫೈನಲ್ಗೆ ಲಗ್ಗೆ ಇಟ್ಟಿದೆ.
ರಣ ರೋಚಕ ಪೈಪೋಟಿ :
ಟೂರ್ನಿಯಲ್ಲಿ ಭಾರತದ ಪ್ರದರ್ಶನ ನೋಡಿದರೆ ತಂಡ ಕಪ್ ಗೆಲ್ಲುವ ಫೇವರಿಟ್. ದುಬೈನ ಒಂದೇ ಕ್ರೀಡಾಂಗಣದಲ್ಲಿ ಎಲ್ಲಾ ಪಂದ್ಯ ಆಡಿರುವ ರೋಹಿತ್ ಶರ್ಮಾ ಪಡೆ, ಟೂರ್ನಿಯುದ್ದಕ್ಕೂ ಅಜೇಯವಾಗಿ ಉಳಿದಿದೆ. ತಾರಾ ಬ್ಯಾಟರ್ಗಳು ಹಾಗೂ ವಿಶ್ವ ಶ್ರೇಷ್ಠ ಸ್ಪಿನ್ನರ್ಗಳೇ ತಂಡದ ಆಧಾರಸ್ತಂಭ. ಒಂದಿಬ್ಬರ ಆಟಕ್ಕೆ ಜೋತು ಬೀಳದೆ ತಂಡವಾಗಿ ಆಡುತ್ತಿರುವ ಭಾರತ, ಫೈನಲ್ನಲ್ಲೂ ಅದೇ ರೀತಿ ಆಡಲಿದೆಯೇ ಎಂಬುದಷ್ಟೇ ಸದ್ಯದ ಕುತೂಹಲವಾಗಿದ್ದು ಭಾರತವೇ 3ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಲಿ ಎಂಬುದೇ ನಮ್ಮ ಹಾರೈಕೆ

