ಮಂಡಿ : ಕಳೆದ ಕೆಲ ದಿನಗಳಿಂದ ಭಾರೀ ವರ್ಷಧಾರೆಯಲ್ಲಿ ಮಿಂದೇಳುತ್ತಿರುವ ಹಿಮಾಚಲಪ್ರದೇಶದಲ್ಲಿ ನಾಯಿಯೊಂದರ ಬೊಗಳುವಿಕೆಯಿಂದ 20 ಕುಟುಂಬಗಳ 67 ಜನರ ಜೀವ ಉಳಿದ ಅಚ್ಚರಿಯ ಘಟನೆ ನಡೆದಿದೆ. ಇದು ಶ್ವಾನಗಳ ನಿಯತ್ತು ಮತ್ತು ಆಪತ್ತನ್ನು ಗ್ರಹಿಸುವ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ನಡುರಾತ್ರಿ, ಮೇಘ ಸ್ಪೋಟ , ದಿಢೀರ್ ಪ್ರವಾಹ, ಭೂಕುಸಿತಗಳಿಂದ ಧರಮ್ಪುರದ ಸಿಯಾತಿ ದುಃಸ್ಥಿತಿಗೆ ತಲುಪಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಕಟ್ಟಡವೊಂದರ 2ನೇ ಮಹಡಿಯಲ್ಲಿ ಮಲಗಿದ್ದ ನಾಯಿ ರಾಕಿ ಜೋರಾಗಿ ಬೊಗಳುತ್ತ ಊಳಿಡಲು ಶುರುವಿಟ್ಟುಕೊಂಡಿತ್ತು. . ಇದರಿಂದ ಎಚ್ಚರಗೊಂಡ ನರೇಂದ್ರ ಎಂಬುವರು ಹೊರಬಂದು ನೋಡಿದಾಗ, ಅವರಿದ್ದ ಮನೆಯ ಗೋಡೆಯಲ್ಲಿ ಬಿರುಕೊಂದು ಮೂಡಿದ್ದು, ನೀರು ನುಗ್ಗಲು ಶುರುವಾಗಿತ್ತು. ಕೂಡಲೇ ನರೇಂದ್ರ ಹಳ್ಳಿಯವರನ್ನೆಲ್ಲಾ ಎಚ್ಚರಿಸಿದ್ದಾರೆ. ತಕ್ಷಣ ಜನರೆಲ್ಲ ತಮ್ಮತಮ್ಮ ಮನೆಯಿಂದ ಹೊರಬಂದು ಸುರಕ್ಷಿತ ಸ್ಥಳದತ್ತ ಧಾವಿಸಿದ್ದಾರೆ.
ಇದಾದ ಕೆಲವೇ ಗಂಟೆಗಳಲ್ಲಿ ಸಂಭವಿಸಿದ ಭೂಕುಸಿತಕ್ಕೆ ಇಡೀ ಹಳ್ಳಿಯೇ ಕೊಚ್ಚಿಕೊಂಡು ಹೋಗಿತ್ತು. ಇತ್ತ ಸಕಾಲಕ್ಕೆ ಮನೆಯಿಂದ ಹೊರಗೋಡಿ ಬಂದಿದ್ದ ಜನ ತ್ರಿಯಂಬಲ ಜಿಲ್ಲೆಯ ನೈನಾ ದೇವಿ ದೇಗುಲದಲ್ಲಿ ಆಶ್ರಯ ಪಡೆದು ಜೀವ ಉಳಿಸಿಕೊಂಡಿದ್ದಾರೆ.

