ಹೊಸದಿಲ್ಲಿ : ದೇಶದ ಜನಸಾಮಾನ್ಯರಿಗೆ ಜಿಎಸ್ಟಿ ತೆರಿಗೆ ಹೊರೆ ತಗ್ಗಿಸುವ ಮಹತ್ವದ 2 ಸ್ಟ್ರಾಬ್, ಸ್ವದೇಶಿ ನಿರ್ಮಿತ ಸೆಮಿಕಂಡಕ್ಟರ್ ನ ಮೊದಲ ಚಿಪ್ ಈ ವರ್ಷಾಂತ್ಯಕ್ಕೆ ಮಾರುಕಟ್ಟೆ ಪ್ರವೇಶ, ತೈಲ ಕ್ಷೇತ್ರದಲ್ಲಿ ವಿದೇಶಿ ಅವಲಂಬನೆ ತಗ್ಗಿಸುವಲ್ಲಿ ಆಳ ಸಾಗರ ತೈಲ ಶೋಧ ಯೋಜನೆ ಸೇರಿದಂತೆ ರಕ್ಷಣೆ, ತಂತ್ರಜ್ಞಾನ, ಇಂಧನ ಸ್ವಾವಲಂಬನೆಗೆ ಇಟ್ಟಿರುವ ದೊಡ್ಡ ಹೆಜ್ಜೆಗಳನ್ನು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಭಾರತ ಅಭಿವೃದ್ಧಿ ಮತ್ತು ಸ್ವಾವಲಂಬನೆಯತ್ತ ಹೇಗೆ ಸಾಗುತ್ತಿದೆ ಎಂಬುದನ್ನು ಒತ್ತಿ ಹೇಳಿದರು. ದೇಶದ 79ನೇ ಸ್ವಾತಂತ್ರೋತ್ಸವದ ಅಂಗವಾಗಿ ದಿಲ್ಲಿಯ ಐತಿಹಾಸಿಕ ಕೆಂಪುಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಸುದೀರ್ಘ 103 ನಿಮಿಷ ಮಾತನಾಡಿದ ಅವರು, ‘ಆಪರೇಷನ್ ಸಿಂದೂರ್’ ಯಶಸ್ಸಿ ಗಾಗಿ ನಮ್ಮ ಹೆಮ್ಮೆಯ ಯೋಧರನ್ನು ಶ್ಲಾಘಿಸಿದರು.

ರೈತರ ಹಿತರಕ್ಷಣೆಗಾಗಿ ಗೋಡೆಯಂತೆ ನಿಲ್ಲುತ್ತೇವೆ :
ರೈತರು, ಮೀನುಗಾರರು ಮತ್ತು ಜಾನುವಾರು ಸಾಕಣೆದಾರರಿಗೆ ಸಂಬಂಧಿಸಿದ ಯಾವುದೇ ಹಾನಿಕಾರಕ ನೀತಿಯ ವಿರುದ್ಧ ಮೋದಿ ಗೋಡೆಯಂತೆ ನಿಲ್ಲಲಿದ್ದಾರೆ. ರೈತರು, ಜಾನುವಾರು ಸಾಕಣೆದಾರರು, ಮೀನುಗಾರರ ಬಗ್ಗೆ ಯಾವುದೇ ರಾಜಿಯನ್ನು ಭಾರತ ಎಂದಿಗೂ ಸ್ವೀಕರಿಸುವುದಿಲ್ಲ ಎಂಬುದಾಗಿ ಪ್ರಧಾನಿ ಮೋದಿಯವರು ದೃಢವಾಗಿ ಸಾರುವ ಮೂಲಕ, ಈ ನಿಟ್ಟಿನಲ್ಲಿ ಭಾರತದ ಮೇಲೆ ವಿವಿಧ ಒತ್ತಡ ತಂತ್ರಗಳನ್ನು ಹೇರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ರೈತರು, ಮೀನುಗಾರರು ಮತ್ತು ಜಾನುವಾರು ಸಾಕಣೆದಾರರಿಗೆ ಸಂಬಂಧಿಸಿದ ಯಾವುದೇ ಹಾನಿಕಾರಕ ನೀತಿಯ ವಿರುದ್ಧ ಮೋದಿ ಗೋಡೆಯಂತೆ ನಿಲ್ಲಲಿದ್ದಾರೆ. ರೈತರು, ಜಾನುವಾರು ಸಾಕಣೆದಾರರು, ಮೀನುಗಾರರ ಬಗ್ಗೆ ಯಾವುದೇ ರಾಜಿಯಿಲ್ಲ ಎಂದಿದ್ದಾರೆ.
ಸ್ವಾತಂತ್ರ್ಯದ ನಂತರ ದೇಶದ ಪ್ರತಿಯೊಬ್ಬರಿಗೂ ಆಹಾರ ನೀಡುವುದು ದೊಡ್ಡ ಸವಾಲಿನ ಕೆಲಸವಾಗಿತ್ತು. ಆದರೆ, ನಮ್ಮ ರೈತರು ನಮ್ಮನ್ನು ಸ್ವಾವಲಂಬಿಯನ್ನಾಗಿ ಮಾಡಿದ್ದು ಅವರ ರಕ್ಷಣೆಯಲ್ಲಿ ರಾಜಿ ಸಾಧ್ಯವಿಲ್ಲ ಎಂದರು. ಜಾಗತಿಕ ಮಾರುಕಟ್ಟೆ ಗಳಲ್ಲಿ ಭಾರತದ ಸಾಮರ್ಥ್ಯವನ್ನು ಸಾಬೀತುಪಡಿಸಲು ನಮ್ಮದೇ ಆದ ರಸಗೊಬ್ಬರಗಳು ಮತ್ತು ಯುದ್ಧ ವಿಮಾನಗಳಿಗೆ ಸ್ಥಳೀಯ ಎಂಜಿನ್ಗಳನ್ನು ಅಭಿವೃದ್ಧಿಪಡಿಸಲು ಕರೆಯಿತ್ತರು.

