ಲಂಡನ್ : ಬ್ರಿಟನ್ ರಾಜಧಾನಿ ಲಂಡನ್ನಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಅವರ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಲು ಯತ್ನಿಸಿದ ಘಟನೆ ಸಂಭವಿಸಿದೆ. ಲಂಡನ್ನ ಚಾಥಂ ಹೌಸ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಮುಗಿಸಿ ಸಚಿವ ಜೈಶಂಕರ್ ಅವರು ವಾಪಸ್ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಅವರ ಬೆಂಗಾವಲು ಪಡೆ ವಾಹನದತ್ತ ನುಗ್ಗಿದ ಖಲಿಸ್ತಾನಿ ಪರ ಪ್ರತಿಭಟನಾಕಾರನೊಬ್ಬ ಭಾರತದ ಧ್ವಜ ಹರಿದಿದ್ದಾನೆ ಈ ಭದ್ರತಾ ವೈಫಲ್ಯದ ಕುರಿತು ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು ಅದರಲ್ಲಿ ಪ್ರತಿಭಟನಾಕಾರನೊಬ್ಬ ಜೈಶಂಕರ್ ಅವರ ಬೆಂಗಾವಲು ಪಡೆಯ ಕಾರಿನತ್ತ ನುಗ್ಗಿದ್ದು, ಪೊಲೀಸರು ಆರಂಭದಲ್ಲಿ ಆತನನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಈ ವೇಳೆ ಆತ ಪೊಲೀಸರ ಎದುರೇ ಭಾರತದ ತ್ರಿವರ್ಣ ಧ್ವಜ ಹರಿದು, ಖಲಿಸ್ತಾನಿ ಪರ ಘೋಷಣೆಗಳನ್ನು ಕೂಗಿದ. ಈ ಸಂದರ್ಭದಲ್ಲಿ ಎಚ್ಚೆತ್ತ ಪೊಲೀಸರು ವ್ಯಕ್ತಿ ಮತ್ತು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಘಟನೆ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.
ಲಂಡನ್ನ ಚಾಥಂ ಹೌಸ್ನಲ್ಲಿ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮೈ ಅವರ ಜತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿ ಜೈಶಂಕರ್ ಹೊರಬರುತ್ತಿದ್ದಾಗ ಈ ಘಟನೆ ನಡೆದಿದೆ
ಭಾರತ ಆಕ್ರೋಶ :
ಭಾರತದ ವಿದೇಶಾಂಗ ಸಚಿವಾಲಯವು ಭದ್ರತಾ ವೈಫಲ್ಯ ಕುರಿತು ಖಂಡನೆ ವ್ಯಕ್ತಪಡಿಸಿದೆ. ನಾವು ಭದ್ರತೆ ಉಲ್ಲಂಘನೆಯ ವಿಡಿಯೋ ನೋಡಿದ್ದೇವೆ. ಪ್ರತ್ಯೇಕತಾವಾದಿಗಳು ಮತ್ತು ಉಗ್ರರ ಸಣ್ಣ ಗುಂಪೊಂದರ ಈ ಕೃತ್ಯವನ್ನು ನಾವು ಖಂಡಿಸುತ್ತೇವೆ. ಬ್ರಿಟನ್ ಸರ್ಕಾರ ಈ ಕುರಿತು ಕ್ರಮ ಕೈಕೊಂಡು ರಾಜತಾಂತ್ರಿಕ ಬಾಧ್ಯತೆ ಪಾಲಿಸುವ ವಿಶ್ವಾಸವಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

