ವಿಶಾಖಪಟ್ಟಣಂ : ಉದ್ವಿಗ್ನ ಜಗತ್ತಿಗೆ ಯೋಗದಿಂದ ಶಾಂತಿಮಾರ್ಗ ಲಭಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಜಗತ್ತಿನಲ್ಲಿ ನಡೆದಿರುವ ಯುದ್ಧಗಳ ಪರೋಕ್ಷ ಪ್ರಸ್ತಾಪವನ್ನು ಅವರು ಮಾಡಿದ್ದಾರೆ.
ವಿಶಾಖಪಟ್ಟಣದ ಆರ್.ಕೆ. ಕಡಲತೀರ ದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನ ದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಇಡೀ ಜಗತ್ತು ಉದ್ವಿಗ್ನವಾಗಿದೆ. ಅನೇಕ ಪ್ರದೇಶಗಳಲ್ಲಿ, ಅಶಾಂತಿ ಮತ್ತು ಅಸ್ಥಿರತೆ ಹೆಚ್ಚುತ್ತಿದೆ. ಹೀಗಿರುವಾಗ, ಯೋಗವು ನಮಗೆ ಶಾಂತಿಯ ದಿಕ್ಕನ್ನು ತೋರಿಸಿ, ಮಾನವೀಯತೆಯು ಉಸಿರಾಡಲು, ಸಮತೋಲನಗೊಳಿಸಲು, ಮತ್ತೆ ಪೂರ್ಣಗೊಳ್ಳಲು ಅಗತ್ಯವಿರುವ ವಿರಾಮದ ಮಾರ್ಗವಾಗಿದೆ’ ಎಂದರು

ಮೋದಿಯಿಂದ ಯೋಗ
ಈ ದಿನ ಮಾನವೀಯತೆಗಾಗಿ ಯೋಗದ 2.0 ಶುರುವಾಗಲಿ ಹಾಗೂ ಆಂತರಿಕ ಶಾಂತಿಯು ಜಾಗತಿಕ ನೀತಿಯಾಗಲಿ ಎಂದು ಹಾರೈಸಿದ ಅವರು, ಯೋಗಾಂಧ್ರ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಅಭಿನಂದಿಸಿದರು.
ಈ ಬಾರಿಯ ಯೋಗದಿನದ ವಿಷಯವಾದ ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗದ ಬಗ್ಗೆ ಮಾತನಾಡುತ್ತ, ‘ಯೋಗವು ಗಡಿ, ಹಿನ್ನೆಲೆ, ವಯಸ್ಸು, ಸಾಮರ್ಥಗಳನ್ನು ಮೀರಿದ್ದಾಗಿದೆ. ಇದು ಇಂದು ವಿಶ್ವವನ್ನು ಒಗ್ಗೂಡಿಸಿದೆ. ಯೋಗವು ಪರಸ್ಪರ ಸಂಬಂಧಗಳ ಕಡೆಗೆ ನಮ್ಮನ್ನು ಜಾಗೃತ ಗೊಳಿಸುತ್ತದೆ. ಅದು ನಮ್ಮನ್ನು ನಾನು ಎಂಬುದರಿಂದ ನಾವು ಎಂಬುವತ್ತ ಕರೆದೊಯ್ಯುತ್ತದೆ. ವಿಶ್ವಸಂಸ್ಥೆಯಲ್ಲಿ ಯೋಗ ದಿನದ ಅಂಗೀಕಾರ ಬಳಿಕ ಯೋಗವು ವಿಶ್ವದ ಕೋಟ್ಯಂತರ ಜನರ ಜೀವನದ ಭಾಗವಾಗಿದೆ. ಎಲ್ಲರೂ ಯೋಗವನ್ನು ಜೀವನ ಶೈಲಿಯಾಗಿಸಿಕೊಳ್ಳಬೇಕು’ಎಂದು ಕರೆ ನೀಡಿದರು.

