ಹೊಸದಿಲ್ಲಿ : ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತಿತರರು ಶಾಮೀಲಾಗಿರುವ ನ್ಯಾಷನಲ್ ಹೆರಾಲ್ಡ್ ಹಗರಣವನ್ನು ಕಳವು ಅಥವಾ ಭ್ರಷ್ಟಾಚಾರ ಎಂದಷ್ಟೇ ಕರೆಯಲಾಗದು. ಬದಲಿಗೆ ಇದು ಆಧುನಿಕ ಕಾಲದ ದರೋಡೆಯೇ ಆಗಿದೆ ಎಂಬುದಾಗಿ ಬಿಜೆಪಿ ನಾಯಕ ಸಂಬಿತ್ ಪಾತ್ರ ಗುರುವಾರ ಹೇಳಿದ್ದಾರೆ.
ಒಂದು ರಾಜಕೀಯ ಕಂಪೆನಿ ಇನ್ನೊಂದು ಕಂಪೆನಿಗೆ ಸಾಲ ನೀಡಬಹುದೇ ? ದೇಣಿಗೆಗಳ ಮೇಲೆ ನಡೆಯುವ ರಾಜಕೀಯ ಪಕ್ಷವಾದ ಕಾಂಗ್ರೆಸ್ ಯಂಗ್ ಇಂಡಿಯನ್ ಮತ್ತು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್)ಗಳಿಗೆ ಬ್ಯಾಂಕ್ನಂತೆ ಸಾಲ ನೀಡಿದ್ದಾದರೂ ಹೇಗೆ ?
ಇಂದು ನಾನು ನಿಮಗೆ ಮನವಿ ಮಾಡುವೆ. ಇದನ್ನು ಕಳ್ಳತನ ಅಥವಾ ಭ್ರಷ್ಟಾಚಾರ ಎಂದು ಕರೆಯದಿರಿ. ಇದೊಂದು ನಿರ್ಲಜ್ಜವಾಗಿ ನಡೆದ ದರೋಡೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಆಧುನಿಕ ಕಾಲದ ದರೋಡೆಕೋರರು. ಇದು ನ್ಯಾಷನಲ್ ಹೆರಾಲ್ಡ್ ದರೋಡೆ ಪ್ರಕರಣ ಎಂದು ಅವರು ಭುವನೇಶ್ವರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನುಡಿದರು.
ಡಾ.ಸುಬ್ರಹ್ಮಣ್ಯಂ ಸ್ವಾಮಿ ದಾಖಲಿಸಿರುವ ಕೇಸಿನಲ್ಲಿ ನ್ಯಾಯಾಲಯದ ಆದೇಶದಂತೆ ಜಾರಿ ನಿರ್ದೇಶನಾಲಯ (ಇಡಿ) ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸ್ಯಾಮ್ ಪಿತ್ರೋಡಾ, ಸುಮನ್ ದುಬೆ ಮತ್ತಿತರರ ವಿರುದ್ಧ ಸಲ್ಲಿಸಿದ ದೋಷಾರೋಪಪಟ್ಟಿಯ ಹಿನ್ನೆಲೆಯಲ್ಲಿ ಸಂಬಿತ್ ಪಾತ್ರ ಕಾಂಗ್ರೆಸನ್ನು ತೀವ್ರ ತರಾಟೆಗೆತ್ತಿಕೊಂಡರು.

