91
ಛತ್ತೀಸಗಢ : ಛತ್ತೀಸಗಢದಲ್ಲಿ ನಕ್ಸಲರ ಬೇಟೆ ಮುಂದುವರೆದಿದ್ದು ಬುಧವಾರ ಭದ್ರತಾ ಪಡೆಯ ಗುಂಡಿಗೆ ದೇಶದ ನಂ.1 ಕುಖ್ಯಾತ ನಕ್ಸಲ್ ನಾಯಕ, ನಿಷೇಧಿತ ಸಿಪಿಐ ಮಾವೋವಾದಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಸವರಾಜು (70 ವರ್ಷ) ಸೇರಿದಂತೆ 27 ನಕ್ಸಲರನ್ನು ಹತ್ಯೆ ಮಾಡಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಗಣನೀಯ ನಷ್ಟ ಅನುಭವಿಸಿರುವ ಮಾವೋವಾದಿ ಚಳವಳಿಗೆ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜು ಸಾವು ದೊಡ್ಡ ಹಿನ್ನಡೆಯಾಗಿದೆ. ಬಸವರಾಜು ಸುಳಿವು ನೀಡಿದರೆ 1.5 ಕೋಟಿ ರು. ಬಹುಮಾನವನ್ನು ಘೋಷಿಸಲಾಗಿತ್ತು
ಆತ ದೇಶದ ನಕ್ಸಲ್ ಚಟುವಟಿಕೆಯ ಬೆನ್ನೆಲುಬು ಎಂದೇ ಖ್ಯಾತಿ ಪಡೆದಿದ್ದ. ಈಗ 27 ನಕ್ಸಲರ ಹತ್ಯೆಯೊಂದಿಗೆ ಛತ್ತೀಸ್ ಗಢದಲ್ಲಿ ಈ ವರ್ಷ ಎನ್ಕೌಂಟರ್ಗೆ ಬಲಿಯಾದ ನಕ್ಸಲರ ಸಂಖ್ಯೆ 200ಕ್ಕೇರಿಕೆಯಾಗಿದೆ.
ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಿ, ಮಾವೋವಾದಿ ಪಿಡುಗು ತೊಡೆದು ಹಾಕುವಲ್ಲಿ ಇದು ದೊಡ್ಡ ಹೆಜ್ಜೆ ಎಂದು ಬಣ್ಣಿಸಿದ್ದಾರೆ.

