ಹೊಸದಿಲ್ಲಿ : ಐದು ರಾಜ್ಯಗಳಿಗೆ ನೂತನ ರಾಜ್ಯಾಧ್ಯಕ್ಷರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮಂಗಳವಾರ ಘೋಷಿಸಿದ್ದಾರೆ. ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ಉತ್ತರಾಖಂಡ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಿಗೆ ಹೊಸ ರಾಜ್ಯಾಧ್ಯಕ್ಷರನ್ನು ಬಿಜೆಪಿ ನೇಮಿಸಿದ್ದು, ಇದರೊಂದಿಗೆ 21 ರಾಜ್ಯಗಳಲ್ಲಿ ನೂತನ ರಾಜ್ಯಾಧ್ಯಕ್ಷರಿಗೆ ಭಾರತೀಯ ಜನತಾ ಪಕ್ಷ ಅವಕಾಶ ಕಲ್ಪಿಸಿದೆ.
ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವಧಿ ಕಳೆದ ವರ್ಷ ಜನವರಿಗೆ ಪೂರ್ಣಗೊಂಡಿತ್ತು. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆ ನಡ್ಡಾ ಅವಧಿ ವಿಸ್ತರಿಸಲಾಗಿತ್ತು. ಈಗ ಪಕ್ಷದ ಆಂತರಿಕ ಚುನಾವಣೆ ಮುಗಿಯುವ ತನಕ ನಡ್ಡಾ ಅವಧಿಯನ್ನು ಪಕ್ಷ ಮತ್ತೊಮ್ಮೆ ವಿಸ್ತರಿಸಿದೆ.
ಮಾಜಿ ಸಚಿವ ರವೀಂದ್ರ ಚವನ್ (ಮಹಾರಾಷ್ಟ್ರ), ಹಿರಿಯ ವಕೀಲ ಮತ್ತು ಮಾಜಿ ಎಂಎಲ್ಸಿ ಎನ್. ರಾಮಚಂರ್ದ ರಾವ್ (ತೆಲಂಗಾಣ), ಹಿರಿಯ ಬಿಜೆಪಿ ನಾಯಕ ಪಿವಿಎನ್ ಮಾಧವ್ (ಆಂಧ್ರ ಪ್ರದೇಶ), ರಾಜ್ಯಸಭೆ ಸದಸ್ಯ ಮಹೇಂದ್ರ ಭಟ್ (ಉತ್ತರಾಖಂಡ್) ಮತ್ತು ಹಿಮಾಚಲ ಪ್ರದೇಶದಲ್ಲಿ ಐದು ಬಾರಿಯ ಶಾಸಕ ರಾಜೀವ್ ಬಿಂದಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಗುರುವಾರ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಮತದಾನ ನಡೆಯಲಿದ್ದು, ಶೀಘ್ರ ರಾಜ್ಯಾಧ್ಯಕ್ಷರನ್ನು ಪಕ್ಷ ಘೋಷಿಸಲಿದೆ.

