ಹೊಸದಿಲ್ಲಿ : ದಿಲ್ಲಿಯನ್ನು ಕಾಡುತ್ತಿರುವ ವಾಯು ಮಾಲಿನ್ಯವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ 10 ವರ್ಷ ಹಳೆಯದಾದ ಡೀಸೆಲ್ ಮತ್ತು 15 ವರ್ಷ ಹಳೆಯದಾದ ಪೆಟ್ರೋಲ್ ವಾಹನಗಳಿಗೆ ತೈಲ ಹಾಕುವುದನ್ನು ಮಂಗಳವಾರದಿಂದಲೇ ಸ್ಥಗಿತಗೊಳಿಸಲಾಗಿದೆ.
ಸುಪ್ರೀಂನ 2018ರ ತೀರ್ಪಿನ ಅನ್ವಯ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಮಂಗಳವಾರ ಬಹು ಏಜೆನ್ಸಿಗಳ ಸಮನ್ವಯದಿಂದ ವಾಹನಗಳ ತಪಾಸಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ 24 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದರೆ, 98 ವಾಹನಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಇದರಲ್ಲಿ 80ಕ್ಕೂ ಹೆಚ್ಚು ವಾಹನಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಸರ್ಕಾರದ ಆದೇಶದ ಅನ್ವಯ ದಿಲ್ಲಿಯಲ್ಲಿನ ಯಾವುದೇ ಪೆಟ್ರೋಲ್ ಬಂಕ್ಗಳಲ್ಲಿ ಹಳೆಯ ವಾಹನಗಳಿಗೆ ತೈಲವನ್ನು ಹಾಕಿಲ್ಲ. ಎಲ್ಲೆಡೆ ಬಿಗಿ ಭದ್ರತೆ ನಿಯೋಜನೆ ಮಾಡಿದ್ದರಿಂದ ಹೆಚ್ಚು ಸಮಸ್ಯೆಯುಂಟಾಗಲಿಲ್ಲ ಎಂದು ಸಾರಿಗೆ ಅಧಿಕಾರಿಗಳು ಹೇಳಿದ್ದಾರೆ.
ಓವರ್ ಏಜ್ ವಾಹನ ಗಳನ್ನು ಜಪ್ತಿ ಮಾಡುವಾಗ ವಾಹನ ಮಾಲೀಕರಿಂದ ಕೊಂಚ ಪ್ರತಿರೋಧವುಂಟಾದರೂ, ಅಧಿಕಾರಿಗಳು ಮನವೊಲಿಕೆ ಮಾಡಿದ್ದಾರೆ. ಜತೆಗೆ ಬಂಕ್ ಮಾಲೀಕರೂ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ದಾರೆ. ಈ ಮಧ್ಯೆ ಸಿಎನ್ಐ ಚಾಲಿತ ವಾಹನಗಳಿಗೆ ಸದ್ಯ ವಿನಾಯಿತಿ ನೀಡಲಾಗಿದೆ.

