ಮಧುಬನಿ (ಬಿಹಾರ): ಪಹಲ್ಗಾಮ್ ಹಂತಕ ಭಯೋತ್ಪಾದಕರು ಭೂಮಿಯ ಕೊನೇ ಅಂಚಿನಲ್ಲಿದ್ದರೂ ಬಿಡುವುದಿಲ್ಲ ಅವರನ್ನು ಹುಡುಕಿ ಹುಡುಕಿ ಹೊಸಕಿ ಹಾಕುತ್ತೇವೆ. ಮತ್ತವರ ರಾಕ್ಷಸೀಯ ಕೃತ್ಯಕ್ಕೆ ಕುಮ್ಮಕ್ಕು ನೀಡಿದವರನ್ನು ಅವರ ಊಹೆ -ಕಲ್ಪನೆಗಳ ಮೀರಿ ದಂಡಿಸಿಯೇ ಸಿದ್ದ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.
ಭಾರತವು ಪಹಲ್ಗಾಮ್ ದಾಳಿಯಲ್ಲಿ ಶಾಮೀಲಾದ ಪ್ರತಿಯೋರ್ವ ಭಯೋತ್ಪಾದಕ ಹಾಗೂ ಅವರ ಹಿಂದಿರುವ ಸೂತ್ರಧಾರಿಗಳ ಜಾಡು ಹಿಡಿದು ದಂಡಿಸಿಯೇ ಸಿದ್ದ ಎಂದು ಇಡೀ ಜಗತ್ತಿಗೆ ಸಾರಿ ಹೇಳುತ್ತಿದ್ದೇನೆ. ಭಾರತದ ಸ್ಫೂರ್ತಿಚೇತನವು ಭಯೋತ್ಪಾದನೆಯೆದುರು ಕಮರದು ಅಥವಾ ತುಂಡರಿಸದು. ಭಯೋತ್ಪಾದನೆಗೆ ದಂಡನೆ ನೀಡಿಯೇ ಸಿದ್ದ ಎಂದರು ಪ್ರಧಾನಿ ಮೋದಿ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ 26 ಮಂದಿ ಅಮಾಯಕ ಪ್ರವಾಸಿಗರು ಬಲಿಯಾದ ಬಳಿಕ ಇದೇ ಮೊದಲ ಬಾರಿಗೆ ಬಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ಅವರು ಉಗ್ರರ ವಿರುದ್ಧ ಗುಡುಗಿದರು.
ಕಾರ್ಯಕ್ರಮದಲ್ಲಿ ಹಿಂದಿಯಲ್ಲೇ ಮಾತ ನಾಡುತ್ತಿದ್ದ ಮೋದಿ ಅವರು, ತಮ್ಮ ಮಾತುಗಳು ಇಡೀ ಜಗತ್ತಿಗೇ ತಲುಪಬೇಕು ಎಂಬ ಉದ್ದೇಶದಿಂದ ಇಂಗ್ಲಿಷ್ನಲ್ಲಿ ಮುಂದುವರಿಸಿದರು. ಇಡೀ ಜಗತ್ತಿಗೇ ನಾನು ಹೇಳುತ್ತಿದ್ದೇನೆ, ತಪ್ಪಿತಸ್ಥರು ಎಲ್ಲೇ, ಜಗತ್ತಿನ ಯಾವುದೇ ಮೂಲೆಯಲ್ಲಿ ಬೇಕಾದರೂ ಅಡಗಿರಲಿ, ಹುಡುಕಿ ಅವರನ್ನು ಶಿಕ್ಷಿಸುತ್ತೇವೆ ಎಂದು ಗಟ್ಟಿ ಮಾತುಗಳಲ್ಲಿ ಹೇಳಿದರು. ಅಷ್ಟೇ ಅಲ್ಲ, ಬೆಂಬಲ, ಕುಮ್ಮಕ್ಕು ನೀಡಿದವರನ್ನೂ ಬಿಡಲ್ಲ ಎಂದ ಅವರು, ಉಗ್ರರಿಗೆ ಸಹಾಯ ಮಾಡುತ್ತಿರುವ ಪಾಕ್ ಗೂ ಎಚ್ಚರಿಕೆ ನೀಡಿದರು.

