ಶ್ರೀನಗರ : ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಪ್ರವಾಸಿಗರನ್ನು ಧರ್ಮ ಕೇಳಿ ಭೀಕರವಾಗಿ ಹತ್ಯೆಗೈದ ಪಾಪಿ ಉಗ್ರರಿಗಾಗಿ ಬೇಟೆಯನ್ನು ಭಾರತೀಯ ಭದ್ರತಾಪಡೆಗಳು ಮತ್ತಷ್ಟು ಚುರುಕುಗೊಳಿಸಿವೆ. ದಾಳಿಯಲ್ಲಿ ಭಾಗಿಯಾಗಿದ್ದ ಲಷ್ಕರ್-ಎ-ತೊಯ್ದಾ ಸಂಘಟನೆಯ ಇಬ್ಬರು ಶಂಕಿತ ಉಗ್ರರ ಮನೆಗಳು ಸೇನೆಯಿಂದ ಸೋಟಕ ತಪಾಸಣೆ ವೇಳೆ ಸ್ಫೋಟಗೊಂಡು ಹಾನಿಗೊಂಡಿದ್ದರೆ, ಮತ್ತೊಂದೆಡೆ ಕಾಶ್ಮೀರದ ನಾಲ್ಕು ಜಿಲ್ಲೆಗೆಳಲ್ಲಿ ಮನೆ ಮನೆಗೂ ತೆರಳಿ ಉಗ್ರರಿಗಾಗಿ ಭದ್ರತಾ ಪಡೆಗಳು ಭಾರೀ ಪ್ರಮಾಣದ ಹುಡುಕಾಟ ಆರಂಭಿಸಿವೆ. ಜೊತೆಗೆ ಸಮೀಪದ ಅರಣ್ಯ ಪ್ರದೇಶಗಳಲ್ಲೂ ಬೃಹತ್ ಕೂಂಬಿಂಗ್ ನಡೆಸುವ ಮೂಲಕ ಉಗ್ರರು ತಪ್ಪಿಸಿಕೊಳ್ಳದಂತೆ ಬಲೆ ಬೀಸಿವೆ.
ಪಹಲ್ಗಾಮ್ ಘಟನೆಯ ಶಂಕಿತ ದಾಳಿಕೋರರಲ್ಲಿ ಒಬ್ಬನಾದ ಆದಿಲ್ ಹುಸೈನ್ ತೋಕರ್ ಮತ್ತು ಉಗ್ರರಿಗೆ ನೆರವು ನೀಡಿದ್ದ ಆಸೀಫ್ ಶೇಖ್ ಮನೆಯಲ್ಲಿ ಸ್ಪೋಟಕ ಸಂಗ್ರಹಿಸಿ ಇಡಲಾಗಿದೆ ಎಂಬ ಮಾಹಿತಿ ಭದ್ರತಾ ಪಡೆಗಳಿಗೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಅನಂತನಾಗ್ನ ಬಿಚ್ಬೆಹರಾದಲ್ಲಿನ ಆದಿಲ್ ಮನೆಯಲ್ಲಿ ತಪಾಸಣೆ ಮಾಡಿದಾಗ ಅಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆಯಾಗಿದೆ. ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸುವ ವೇಳೆ ಅವು ಸ್ಫೋಟಗೊಂಡಿವೆ. ಇನ್ನೊಂದೆಡೆ ಪುಲ್ವಾ ಮಾದ ಫ್ರಾಲ್ನಲ್ಲಿರುವ ಆಸಿಫ್ ಶೇಖ್ ಮನೆ ಯಲ್ಲೂ ಶುಕ್ರವಾರ ತಪಾಸಣೆ ವೇಳೆ ಸ್ಫೋಟ ಸಂಭವಿಸಿದೆ. ಎರಡೂ ಪ್ರಕರಣಗಳಲ್ಲಿ ಮನೆ ಛಿದ್ರಗೊಂಡಿದೆ. ಒಂದು ವೇಳೆ ಸ್ಪೋಟಕಗಳನ್ನು ನಿಷ್ಕ್ರಿಯಗೊಳಿಸದೇ ಹೋಗಿದ್ದರೆ ಮತ್ತೊಂದು ದೊಡ್ಡ ಅನಾಹುತದ ಸಾಧ್ಯತೆ ಇತ್ತು ಎಂದು ಭದ್ರತಾ ಪಡೆಗಳು ತಿಳಿಸಿವೆ

