ಆಲಿಗಢ : ಜಾತಿ ಭೇದಗಳನ್ನು ನೀಗಿ ಸಾಮಾಜಿಕ ಸಾಮರಸ್ಯಕ್ಕಾಗಿ ಶ್ರಮಿಸುವಂತೆ ಹಿಂದು ಸಮಾಜಕ್ಕೆ ಕರೆ ನೀಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್) ಸರಸಂಘಚಾಲಕ್ ಡಾ.ಮೋಹನ್ ಭಾಗತ್ ಅವರು, ಒಂದು ದೇಗುಲ, ಒಂದು ಬಾವಿ, ಒಂದು ಸ್ಮಶಾನ ಎಂಬುದು ಎಲ್ಲರಿಗೂ ಇರುವಂತಹದ್ದಾಗಿರಬೇಕೆಂಬುದು ನಮ್ಮ ನೀತಿಯಾಗಿರಲಿ ಎಂದಿದ್ದಾರೆ.
ಆಲಿಗಢಕ್ಕೆ 5 ದಿನಗಳ ಭೇಟಿಗಾಗಿ ಆಗಮಿಸಿರುವ ಅವರು, ಅಲ್ಲಿನ ಎಚ್ಬಿ ಇಂಟರ್ ಕಾಲೇಜು ಮತ್ತು ಪಂಚನ್ ನಗ್ರಿಯ ಪಾಕ್ ಎರಡು ಶಾಖೆಗಳಲ್ಲಿ ಸ್ವಯಂಸೇವಕರ ಜತೆ ಸಂವಾದ ನಡೆಸಿ, ವಿಶ್ವ ಶಾಂತಿಯ ಜಾಗತಿಕ ಹೊಣೆಗಾರಿಕೆಯನ್ನು ಪೂರ್ಣಗೊಳಿಸುವಲ್ಲಿ ಭಾರತ ಈ ನೈಜ ಸಾಮಾಜಿಕ ಏಕತೆಯನ್ನು ಸಾಧಿಸುವುದು ಅತ್ಯಗತ್ಯ ಎಂಬುದಾಗಿ ಅವರು ಒತ್ತಿ ಹೇಳಿದರು.
ಸಂಸ್ಕಾರ (ಮೌಲ್ಯಗಳು) ಹಿಂದು ಸಮಾಜದ ಭದ್ರ ತಳಹದಿಯಾಗಿದ್ದು ಅತ್ಯಂತ ಮಹತ್ವದ್ದಾಗಿದೆ. ಸ್ವಯಂಸೇವಕರು ಪರಂಪರೆ, ಸಾಂಸ್ಕೃತಿಕ ಮೌಲ್ಯಗಳು ಮತ್ತು ನೈತಿಕ ತತ್ವಗಳ ಆಧಾರದಲ್ಲಿ ಸಮಾಜವನ್ನು ಕಟ್ಟಿ ಬಲಗೊಳಿಸುವಲ್ಲಿ ಶ್ರಮಿಸಬೇಕೆಂದು ಆಗ್ರಹಿಸಿದರು. ಈ ನಿಟ್ಟಿನಲ್ಲಿ ಸ್ವಯಂಸೇವಕರು ಸಮಾಜದ ಎಲ್ಲ ವರ್ಗಗಳನ್ನೂ ತಲುಪುವಂತಾಗಬೇಕು ಅವರನ್ನು ತಮ್ಮ ಮನೆಗಳಿಗೆ ಆಹ್ವಾನಿಸಿ ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಸೌಹಾರ್ದ, ಏಕತೆಯನ್ನು ತಳಮಟ್ಟದಲ್ಲಿ ಪಸರಿಸಬೇಕೆಂದರು.
ಕುಟುಂಬವೊಂದು ಸಾಮಾಜಿಕ ಏಕತೆಯ ಮೂಲ ಘಟಕವಾಗಿ ಉಳಿಯುವಂತಾಗಬೇಕು. ಬಲಿಷ್ಠ ಕೌಟುಂಬಿಕ ಮೌಲ್ಯಗಳನ್ನು ಸಂಸ್ಕಾರದಿಂದ ಪಡೆದುಕೊಳ್ಳುವಂತಾಗಬೇಕು. ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವುದರಿಂದ ರಾಷ್ಟ್ರೀ ಯತೆ ಮತ್ತು ಸಾಮಾಜಿಕ ಒಗ್ಗಟ್ಟನ ತಳಹದಿಗಳನ್ನು ಇನ್ನಷ್ಟು ಬಲಿಷ್ಠಗೊಳಿಸಲು ಸಾಧ್ಯ ಎಂದರು.

