ಶಿವಮೊಗ್ಗ : ನಾನೇ ಶಂಕುಸ್ಥಾಪನೆ ನೆರವೇರಿಸಿದ್ದ ಅಂಬಾರಗೋಡ್ಲು – ಕಳಸವಳ್ಳಿ ಸೇತುವೆಯನ್ನು ಇದೀಗ ನಾನೇ ಉದ್ಘಾಟಿಸಿದ್ದು ನನ್ನ ಸೌಭಾಗ್ಯ. ಇದು ಸಿಗಂದೂರು ಶ್ರೀ ಚೌಡೇಶ್ವರಿಯ ಆಶೀರ್ವಾದದಿಂದ ಸಾಧ್ಯವಾಗಿದೆ ಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು.
ಸಿಗಂದೂರು ಸೇತುವೆ ಉದ್ಘಾಟನೆ ಹಿನ್ನೆಲೆಯಲ್ಲಿ ಸಾಗರದ ನೆಹರೂ ಮೈದಾನ ದಲ್ಲಿ ಸೋಮವಾರ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು
ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕೋರಿಕೆ ಮೇರೆಗೆ ಶಂಕುಸ್ಥಾಪನೆಗೆ ನಾನು ಇಲ್ಲಿಗೆ ಬಂದಿದ್ದೆ. ಸೇತುವೆ ಕಾಮಗಾರಿಯ ವೆಚ್ಚ ಹೆಚ್ಚಾಗಿತ್ತು, ಇದರ ಜೊತೆಗೆ ಬೇರೆ, ಬೇರೆ ಅಡಚಣೆಗಳಿದ್ದವು. ಆದರೂ, ಸಿಗಂದೂರು ಚೌಡೇ ಶ್ವರಿಯ ಆಶೀರ್ವಾದದಿಂದ ಕೆಲಸ ಪೂರ್ಣವಾಗಿದೆ. ಹೀಗಾಗಿ, ಈ ಸೇತುವೆಗೆ ಶ್ರೀ ಮಾತಾ ಸಿಗಂದೂರು ಚೌಡೇಶ್ವರಿ ದೇವಿ ಹೆಸರನ್ನು ಘೋಷಣೆ ಮಾಡುತ್ತೇನೆ. ಮುಂದೆ ಇದೇ ಹೆಸರನ್ನು ಇಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂಸದ ಬಿ.ವೈ.ರಾಘವೇಂದ್ರ ಅವರು ಬೆನ್ನು ಬಿಡದ ಬೇತಾಳದಂತೆ ಬೆನ್ನತ್ತಿ ಕೆಲಸ ಮಾಡಿಸಿಕೊಳ್ಳುವ ವ್ಯಕ್ತಿ. ಚಿಕ್ಕ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಸೇರಿಸಿ 473 ಕೋಟಿ ವೆಚ್ಚದಲ್ಲಿ ಸಿಗಂದೂರು ಸೇತುವೆ ನಿರ್ಮಾಣ ಮಾಡಿಸಿದ್ದಾರೆ. ಎಂದರು.

