ನವದೆಹಲಿ : ಭಾರತದ ಮನವಿಯ ಮೇರೆಗೆ ಅಮೆರಿಕದಿಂದ ಗಡೀಪಾರಾಗುವುದಕ್ಕೂ ಮೊದಲು ಉಗ್ರ ತಹಾವುರ್ ರಾಣಾ ಅದರಿಂದ ಪಾರಾಗಲು ಮಾಡಿದ್ದ ಯತ್ನಗಳ ಮಾಹಿತಿ ಇದೀಗ ಬಯಲಾಗಿದೆ.
ಭಾರತಕ್ಕೆ ಬರುವುದರಿಂದ ತಪ್ಪಿಸಿಕೊಳ್ಳಲು ಇದ್ದ ಕಾನೂನಾತ್ಮಕ ಮಾರ್ಗಗಳೆಲ್ಲಾ ಮುಚ್ಚಿದಾಗ, ಆತನ ಪರ ವಕೀಲ ಜಾನ್ ಡಿ ಕ್ರೈನ್, 2025ರ ಜ.21ರಂದು ಅಮೆರಿಕ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದರು. ಅದರಲ್ಲಿ, ‘ರಾಣಾನಿಗೆ 30ಕ್ಕೂ ಅಧಿಕ ಆರೋಗ್ಯ ಸಮಸ್ಯೆಗಳಿವೆ. ಜೊತೆಗೆ, ಆತ ಪಾಕಿಸ್ತಾನ ಮೂಲದವನಾಗಿದ್ದು, ಭಾರತದ ಇತಿಹಾಸದ ಅತಿ ಘೋರ ಉಗ್ರದಾಳಿಯಲ್ಲಿ ಭಾಗಿಯಾದ ಆರೋಪ ಹೊತ್ತಿದ್ದಾನೆ. ಆದ್ದರಿಂದ ಅವನಿಗೆ ಭಾರತದ ಜೈಲಿನಲ್ಲಿ ಹಿಂಸೆ ಕೊಡುವ ಸಾಧ್ಯತೆ ಇದೆ. ಭಾರತದ ಜೈಲುಗಳ ಪರಿಸ್ಥಿತಿ ಶೋಚನೀಯವಾಗಿದ್ದು, ಆತ ವಿಚಾರಣೆಗೆ ಕಾಯುತ್ತಿರುವಾಗಲೇ ಸಾಯಲೂಬಹುದು’ ಎನ್ನಲಾಗಿತ್ತು.
ರಾಣಾನ ಆರೋಗ್ಯ, ಕಳೆದ 5 ವರ್ಷಗಳಿಂದ ತೀರಾ ಹದಗೆಟ್ಟಿದೆ. 2024ರಲ್ಲಿ ಆತನಿಗೆ ಪಾರ್ಕಿನ್ಸನ್ ಕಾಯಿಲೆ ಕಾಣಿಸಿಕೊಂಡಿ ದ್ದು, ಅದು ಉಲ್ಬಣಿಸುತ್ತಿದೆ. ಕ್ಯಾನ್ಸರ್ಗೂ ಚಿಕಿತ್ಸೆ ಪಡೆದಿದ್ದಾನೆ. ಜೊತೆಗೆ, ಆತನ ಮಾನಸಿಕ ಸಾಮರ್ಥವೂ ಕ್ಷೀಣಿಸುತ್ತಿದೆ’ ಎಂದು ರಾಣಾನಿಗಿರುವ ಅನಾರೋಗ್ಯದ ಪಟ್ಟಿಯನ್ನೇ ಸಲ್ಲಿಸಲಾಗಿತ್ತು.
ಇದಕ್ಕೆ 3 ವಾರಗಳಲ್ಲಿ ಪ್ರತಿಕ್ರಿ ಯಿಸಿದ ಅಮೆರಿಕ ಸರ್ಕಾರ, ರಾಣಾನಿಗೆ ಚಿತ್ರ ಹಿಂಸೆ ಕೊಡಲಾಗುತ್ತದೆ ಎಂಬ ಆರೋಪವನ್ನು ತಳ್ಳಿಹಾಕಿದ್ದು, ಆತನ ಹಸ್ತಾಂತರ ಖಚಿತ ಎಂದು ಖಡಾಖಂಡಿತವಾಗಿ ಹೇಳಿತ್ತು. ಜೊತೆಗೆ, ಆತನ ಗಡೀಪಾರಲ್ಲಿ ಎಲ್ಲಾ ಅಂತಾರಾಷ್ಟ್ರೀಯ ನಿಯಮ ಪಾಲಿಸಲಾಗುತ್ತದೆ. ರಾಣಾನ ವೈದ್ಯಕೀಯ ವರದಿಯನ್ನು ಭಾರತೀಯ ಅಧಿಕಾರಿಗಳಿಗೆ ಅಗತ್ಯವಿರುವ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಅಮೆರಿಕದ ರಾಜ್ಯ ಕಾರ್ಯದರ್ಶಿ ಮಾರ್ಕೋ ರುಬಿಯೋ ಹೇಳಿದ್ದರು.

