ಲಖನೌ : ಭಾರತವೀಗ ಮೌನ ಕೊನೆಗಾಣಿಸಿ ಬಲಿಷ್ಠ ಶಕ್ತಿಯೊಂದಿಗೆ ಪ್ರತಿಕ್ರಿಯಿಸುತ್ತಿದೆ. ಯಾರಾದರು ನಮ್ಮ ದೇಶದ ಮೇಲೆ ಸಮರ ಹೇರಿದರೆ ಆಪರೇಶನ್ ಸಿಂದೂರ್ ರೂಪದಲ್ಲೇ ಪ್ರತ್ಯುತ್ತರವಿರುತ್ತೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಚ್ಚರಿಸಿದ್ದಾರೆ.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಎನ್ ಡಿಎ ಸರ್ಕಾರ 11 ವರ್ಷಗಳ ದಕ್ಷ ಆಡಳಿತ ಪೂರ್ತಿಗೊಳಿಸಿದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ `ಯೋಗಿ, ಈ ಹನ್ನೊಂದು ವರ್ಷಗಳು ಸಂಪನ್ನ ಮತ್ತು ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ಸ್ವರ್ಣಕಾಲವೆಂಬುದಾಗಿ ಅವಿಸ್ಮರಣೀಯವಾಗಲಿದೆ ಎಂದು ಹೇಳಿದರು. ಯಾರಾದರು ನಮ್ಮ ವಿರುದ್ಧ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದಲ್ಲಿ ಸರ್ಜಿಕಲ್ ಸೈಕ್, ವೈಮಾನಿಕ ದಾಳಿ ಮತ್ತು ಆಪರೇಶನ್ ಸಿಂದೂರ್ ಮುಖೇನ ಉತ್ತರಿಸಲಾಗುವುದು ಎಂದು ಎಚ್ಚರಿಕೆಯ ಸಂದೇಶ ನೀಡಿದರು.
2014ರ ಮುನ್ನ ಇದ್ದ ಸರಕಾರಗಳು ಭಯೋತ್ಪಾದನೆ ಬಗ್ಗೆ ನಿರ್ಲಿಪ್ತ ಮತ್ತು ನಿಷ್ಕ್ರಿಯ ಧೋರಣೆ ಹೊಂದಿದ್ದವು. ದೇಶಕ್ಕೆ ಯಾವುದೇ ತೊಂದರೆ ಎದುರಾದರೂ, ದಾಳಿ ನಡೆದರೂ ಶಾಂತಿ ಮಂತ್ರವನ್ನಷ್ಟೆ ಜಪಿಸಬೇಕೆಂಬ ಚಿಂತನೆ-ಮನೋಪ್ರವೃತ್ತಿ ಆಗ ಗಾಢವಾಗಿತ್ತು. ಆದರೆ ಪ್ರಸಕ್ತ ಕೇಂದ್ರ ನಾಯಕತ್ವ ಜಾರಿಗೊಳಿಸಿರುವ ಹೊಸ ನಿಯಮದಡಿ ಹಿಂದಿನ ನಿಷ್ಕ್ರಿಯ ಚಿಂತನೆಗೆ ಜಾಗವಿಲ್ಲ, ಆ ಮನೋಪ್ರವೃತ್ತಿಗೆ ಸಂಪೂರ್ಣ ತಿಲಾಂಜಲಿ ಹೇಳಲಾಗಿದೆ ಎಂದರು.

