ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿಯ ದೇವಸ್ಥಾನ ಕರ್ನಾಟಕದ ಪ್ರಸಿದ್ಧ ದುರ್ಗಾದೇವಿಯ ಪುಣ್ಯಕ್ಷೇತ್ರಗಳಲ್ಲಿ ಒಂದು . ಭಕ್ತರು ಬೇಡಿ ಬಂದ ಎಲ್ಲಾ ಇಷ್ಟಾರ್ಥಗಳನ್ನು ಅನುಗ್ರಹಿಸುವ ತಾಯಿ ಈ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿ. ಕುಬ್ಜ ನದಿಯ ದಡದಲ್ಲಿದೆ ಈ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿಯ ಸುಂದರವಾದ ದೇವಸ್ಥಾನ . ಇಲ್ಲಿ ದೇವಿಯು ಲಿಂಗದ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಕುಂದಾಪುರದಿಂದ 35km ದೂರದಲ್ಲಿದೆ ಕಮಲಶಿಲೆ ದೇವಸ್ಥಾನ. ಸುಂದರವಾದಂತಹ ಬೆಟ್ಟ ಗುಡ್ಡಗಳು ಮತ್ತು ಪ್ರಕೃತಿಯ ನಡುವೆ ಕಂಗೊಳಿಸುತ್ತಿದೆ ಕಮಲ ಶಿಲೆಯ ದೇವಸ್ಥಾನ . ಪುರಾಣಗಳ ಪ್ರಕಾರ ಕೈಲಾಸದಲ್ಲಿದ್ದ ಸುಂದರವಾದ ನೃತ್ಯಗಾತಿ ಪಿಂಗಳೆ ನರ್ತಿಸಲು ಒಪ್ಪದಿದ್ದಾಗ ಪಾರ್ವತಿ ಕೊಟ್ಟಂತಹ ಶಾಪದಿಂದ ಕುಬ್ಜೆಯಾಗಿ ಭೂಲೋಕದಲ್ಲಿ ಜನಿಸುತ್ತಾಳೆ .
ಪಿಂಗಳೆಯ ಶಾಪ ವಿಮೋಚನೆಗಾಗಿ ಪಾರ್ವತಿ ದೇವಿ ಸಹ್ಯಾದ್ರಿಯ ತಪ್ಪಲಿನಲ್ಲಿರುವ ಕಮಲಶಿಲೆಯ ಲಿಂಗದ ರೂಪದಲ್ಲಿ ಕಾಣಿಸಿಕೊಂಡಳು . ಭೂಲೋಕದಲ್ಲಿ ಕುಬ್ಜೆಯಾಗಿ ಹುಟ್ಟಿದ ಪಿಂಗಳೆ ತನ್ನ ಕುರೂಪಿ ಈ ಜನ್ಮದ ಮೋಕ್ಷಕ್ಕಾಗಿ ಕಮಲಶಿಲೆಯಲ್ಲಿರುವ ಗುಹೆ ಒಂದರಲ್ಲಿ ತಪಸ್ಸು ಮಾಡತೊಡಗುತ್ತಾಳೆ. ಪಾರ್ವತಿ ದೇವಿಯು ಗುಹೆಯಲ್ಲಿ ಹುಟ್ಟುವ ನಾಗತೀರ್ಥ ಮತ್ತು ಕುಬ್ಜಾನದಿಯ ಸಂಗಮ ಕ್ಷೇತ್ರದಲ್ಲಿ ಕಮಲಶಿಲೆಯ ಲಿಂಗದ ರೂಪದಲ್ಲಿ ಪ್ರತ್ಯಕ್ಷವಾಗುತ್ತಾಳೆ .
ದೇವಿಯು ಕುಬ್ಜೆಗೆ ಶ್ರೀ ಕೃಷ್ಣನ ಸ್ಪರ್ಶದಿಂದ ಆಕೆಯ ಶಾಪ ವಿಮೋಚನೆಯಾಗುತ್ತದೆ ಎಂದು ಹೇಳಲು ಕುಬ್ಜೆಯನ್ನು ಮಥುರೆಗೆ ತೆರಳು ಎಂದು ತಿಳಿಸುತ್ತಾಳೆ.ಮಥುರೆ ಪಟ್ಟಣದಲ್ಲಿ ಶ್ರೀ ಕೃಷ್ಣನ ಸ್ಪರ್ಶದಿಂದ ಕುಬ್ಜೆಯ ಶಾಪ ವಿಮೋಚನೆಯಾಗುತ್ತದೆ . ಕಮಲಿಶಿಲೆಯಲ್ಲಿ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿ ಪ್ರಧಾನವಾಗಿ ಪೂಜಿಸಲ್ಪಡುತ್ತಾಳೆ.
ದೇವಸ್ಥಾನದ ಆವರಣದಲ್ಲಿ ಗಣಪತಿ, ವೀರಭದ್ರ, ಈಶ್ವರ, ಬಸಮ್ಮ ದೇವಿ ಮುದಂತಾಯ, ನಾಗದೇವತೆಗಳು ಪೂಜಿಸಲ್ಪಡುತ್ತಾರೆ. ಮಳೆಗಾಲದಲ್ಲಿ ಪ್ರತಿ ವರ್ಷವೂ ಕುಬ್ಜ ನದಿಯ ನೀರು ದೇವಿಯ ಪದವನ್ನು ಸ್ಪರ್ಶಿಸಿ ಹೋಗುತ್ತದೆ. ಕುಬ್ಜೆ ತನ್ನ ಶಾಪವಿಮೋಚನೆಗಾಗಿ ದೇವಿಯ ಪಾದವನ್ನು ಸ್ಪರ್ಶಿಸುತ್ತಾಳೆ ಎಂಬ ಪ್ರತೀತಿ ಇದೆ.
ಕಮಲಿಶಿಲೆಯಿಂದ 2 ಕಿಲೋಮೀಟರ್ ದೂರದಲ್ಲಿ ದೇವಿಯ ಆದಿ ಗುಹಾಲಯವಿದೆ. ಈ ಗುಹಾಲಯವು ದೇವಿಯ ಮೂಲ ಕ್ಷೇತ್ರವಾಗಿರುತ್ತದೆ. ಕಮಲಿಶಿಲೆ ದುರ್ಗಾಪರಮೇಶ್ವರಿ ದೇವಿ ಮಾಡುವ ಪವಾಡಗಳು ಅಪಾರ ಇದಕ್ಕೆ ಇಲ್ಲಿ ಬರುವಂತಹ ಸಾವಿರಾರು ಭಕ್ತರೇ ಸಾಕ್ಷಿ

ಪ್ರದೀಪ್,ಚಿನ್ಮಯಿ ಅಸ್ಪತ್ರೆ ಕುಂದಾಪುರ

