ಶತಕೋಟಿ ಭಾರತೀಯರ ಐದು ಶತಮಾನಗಳ ಕನಸು ಕೊನೆಗೂ ಸಾಕಾರಗೊಂಡಿದೆ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ರಾಮಮಂದಿರ ವಿಧ್ಯುಕ್ತವಾಗಿ ಉದ್ಘಾಟನೆಗೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಹಸ್ತದಿಂದ ಬಾಲರಾಮನ ಪ್ರತಿಷ್ಠಾಪನೆ ಸೋಮವಾರ ಮಧ್ಯಾಹ್ನ 12.30ರ ಶುಭಮುಹೂರ್ತದಲ್ಲಿ ನೆರವೇರಿದ್ದು ಇತಿಹಾಸ ಸೃಷ್ಟಿಸಿದೆ
ಒಂದು ಗಂಟೆ ಅವಧಿಯ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ 51 ಇಂಚು ಎತ್ತರದ 5 ವರ್ಷ ವಯಸ್ಸಿನ ಮಂದಸ್ಮಿತ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ‘ವೇದ ಘೋಷಗಳ ನಡುವೆ ಶಂಖ ಊದಿ ಹೆಲಿಕಾಪ್ಟರ್ ಮೂಲಕ ದೇವಸ್ಥಾನದ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು
ಮೋದಿ ನಡೆಸಿದ ಧಾರ್ಮಿಕ ವಿಧಿಗಳ ವೇಳೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರ್ಎಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉಪ ಸ್ಥಿತರಿದ್ದರು.
ದೇಶಾದ್ಯಂತ ಜನರು ಟೀವಿಗಳಲ್ಲಿ ಇದರ ನೇರಪ್ರಸಾರ ವೀಕ್ಷಿಸಿದರು. ಪ್ರತಿಷ್ಠಾಪನೆ ಬಳಿಕ ಮಾತನಾಡಿದ ಮೋದಿ, ‘ಇದು ಭಾವುಕ ಕ್ಷಣ, ರಾಮನಿಗೆ ಮನೆ ಸಿಕ್ಕಿದೆ ಆತನ ಟೆಂಟ್ ವಾಸ ಮುಕ್ತಾಯವಾಗಿದೆ’ ಎಂದು ಭಾವನಾತ್ಮಕ ಶೈಲಿಯಲ್ಲಿ ಮಾತನಾಡಿದರು


