ಬೆಂಗಳೂರು : ‘ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂಳಲಾಗಿದೆ ಎಂದು ಅನೇಕ ಸಂಘಟನೆಗಳು, ಗಣ್ಯರು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಹಬ್ಬಿಸಿದರು. ಇಲ್ಲಿಯವರೆಗೂ ಅಂತಹದ್ದು ಏನೂ ದೊರೆತಿಲ್ಲ. ಆದ್ದರಿಂದ, ಅನಾಮಿಕ ಯಾರು ? ಅವರ ಹಿಂದೆ ಯಾರಿದ್ದಾರೆ ? ಎಂಬುದು ಸೇರಿ ಎಲ್ಲವನ್ನೂ ತನಿಖೆ ನಡೆಸಬೇಕಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಧರ್ಮಸ್ಥಳ ಬಗ್ಗೆ ಸುಳ್ಳು ಆರೋಪ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯದ ಹಲವೆಡೆ ಭಕ್ತರು, ಸಂಘಟನೆಗಳು ಬುಧವಾರ ಪ್ರತಿಭಟನೆ ನಡೆಸಿದ್ದು ಸದನದಲ್ಲೂ ಈ ವಿಷಯ ಮಾರ್ದನಿಸಿತ್ತು. ಈ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಉತ್ತರಿಸಿದ ಸಚಿವರು, ಪ್ರಪಂಚದಲ್ಲೇ ಈ ರೀತಿ ಎಲ್ಲೂ ಆಗಿಲ್ಲ ಸಾಕ್ಷಿ ಇಲ್ಲದೇ ಕೆಲವರು ಬಿಂಬಿಸಿದ್ದಾರೆ. ಅವರ ಉದ್ದೇಶ ಏನಾಗಿತ್ತು ಎಂಬ ಬಗ್ಗೆ ಸರಿಯಾದ ತನಿಖೆ ಆಗಬೇಕು’ ಎಂದು ಹೇಳಿದರು.
‘ಧರ್ಮಸ್ಥಳ ವಿರುದ್ಧವಾಗಿ ಪ್ರಚಾರ ನಡೆಸಲಾಗಿತ್ತು. ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತೆ ಘಟನೆಯನ್ನು ವೈಭವೀಕರಿಸಿದರು. ಭಯಾನಕವಾಗಿ ಏನೋ ನಡೆದಿದೆ ಎಂದು ಅನೇಕರು ಹೇಳಿದ್ದರು. ಆಗ ಧರ್ಮಸ್ಥಳದವರೂ ಎಸ್ಐಟಿ ರಚಿಸಲಿ ಎಂದು ಹೇಳಿದ್ದರು. ಅದರಂತೆ ಕಾನೂನು ಪ್ರಕಾರ ರಚನೆಯಾಯಿತು. ಆದರೆ ಇಲ್ಲಿಯವರೆಗೂ ಗುರುತು ಮಾಡಿದ ಸ್ಥಳಗಳಲ್ಲಿ ಅಂತಹದ್ದು ಏನೂ ದೊರೆತಿಲ್ಲ ಎಂದು ದೃಢಪಡಿಸಿದರು.

