ಬೆಂಗಳೂರು : ನಟಿ ರನ್ಯಾರಾವ್ ವಿರುದ್ಧದ ಚಿನ್ನ ಅಕ್ರಮ ಸಾಗಣೆ ಪ್ರಕರಣದ ತನಿಖೆಯ ಮತ್ತೊಂದು ಮಜಲು ತೆರೆದುಕೊಂಡಿದ್ದು, ಕೇಂದ್ರೀಯ ತನಿಖಾ ದಳ(ಸಿಬಿಐ) ಪ್ರಕರಣದ ತನಿಖೆ ಆರಂಭಿಸಿದೆ. ಏತನ್ಮಧ್ಯೆ, ರನ್ನಾ ಮಲ ತಂದೆ ಡಿಜಿಪಿ ರಾಮಚಂದ್ರ ರಾವ್ ವಿರುದ್ಧವೂ ಇಲಾಖಾ ತನಿಖೆಗೆ ಆದೇಶ ನೀಡಲಾಗಿದೆ. ಮತ್ತೊಂದೆಡೆ ರನ್ಯಾಳ ಪತಿ ಜತಿನ್ ಹಾಗೂ ಇತರ ಇಬ್ಬರು ಸ್ವಗರ್ಗಳು ನೀಡಿದ ಮಾಹಿತಿಯೇ ಆಕೆ ಸಿಕ್ಕಿಬೀಳಲು ಕಾರಣ ಎನ್ನಲಾಗಿದೆ.
ಡಿಆರ್ಐ ಅಧಿಕಾರಿಗಳು ಒಂದೆಡೆ ತೀವ್ರ ತನಿಖೆ ನಡೆಸುತ್ತಿದ್ದರೆ, ಸಿಬಿಐ ಕೂಡ ತನಿಖೆ ಆರಂಭಿಸಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ.
ಬೆಂಗಳೂರಿನಲ್ಲಿರುವ ರನ್ಯಾ ರಾವ್ ನಿವಾಸ, ಅವರ ವಿವಾಹ ಜರುಗಿದ ಹೋಟೆಲ್, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ರನ್ಯಾ ಜತೆಗೆ ಸಂಪರ್ಕ ಹೊಂದಿರುವವರ ಕುರಿತು ಸಾಕ್ಷ್ಯಾಧಾರಗಳನ್ನು ಕಲೆ ಹಾಕುವುದರ ಭಾಗವಾಗಿ ಅವರ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದ ಅತಿಥಿಗಳು, ಬಂದಿರುವ ದುಬಾರಿ ಉಡುಗೊರೆಗಳ ಕುರಿತು ತಿಳಿದುಕೊಳ್ಳಲು ವಿವಾಹದ ದೃಶ್ಯಾವಳಿಗಳು ಮತ್ತು ಅತಿಥಿಗಳ ಪಟ್ಟಿಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ನಿಗದಿತ ಅವಧಿಯಲ್ಲಿ ಕೆಐಎಡಿಬಿಯಿಂದ ಅನುಮೋದನೆಯಾದ ಭೂ ವಿವರದ ಮಾಹಿತಿ ಕಲೆಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

