ಮಂಡ್ಯ : ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಭರ್ತಿಯಾದ ಕೃಷ್ಣರಾಜಸಾಗರ ಜಲಾಶಯದಲ್ಲಿ ವಾಡಿಕೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸಿಎಂ ಡಿ.ಕೆ.ಶಿವಕುಮಾರ್, ಹಲವು ಸಚಿವರು, ಸ್ಥಳೀಯ ಜಲಪ್ರತಿನಿಧಿಗಳ ಜೊತೆ ಸೋಮವಾರ ಜಲಾಶಯಕ್ಕೆ ಆಗಮಿಸಿ ಬಾಗಿನ ಸಮರ್ಪಿಸಿದರು. ಇದರೊಂದಿಗೆ ಜೂನ್ ತಿಂಗಳಲ್ಲಿ ಬಾಗಿನ ಅರ್ಪಿಸಿದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಸಿದ್ದರಾಮಯ್ಯ ಸಿಎಂ ಆಗಿ 3ನೇ ಬಾರಿ, ಡಿಸಿಎಂ ಆಗಿ ಒಮ್ಮೆ, ಒಟ್ಟು ನಾಲ್ಕು ಬಾರಿ ಬಾಗಿನ ಸಮರ್ಪಿಸಿದ ಹಿರಿಮೆಗೆ ಪಾತ್ರರಾ ಗಿದ್ದಾರೆ. ಬಾಗಿನ ಅರ್ಪಣೆ ಹಿನ್ನೆಲೆ ಜಲಾಶಯವನ್ನು ವಿವಿಧ ಹೂವುಗಳಿಂದ ಶೃಂಗರಿಸಲಾ ಗಿತ್ತು. ತಳಿರು ತೋರಣಗಳನ್ನು ಕಟ್ಟಿದ್ದರಿಂದ ಅಣೆಕಟ್ಟು ಬಳಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಜಲಾಶಯದ ಕೆಳ ಭಾಗದಲ್ಲಿರುವ ಕಾವೇರಿ ಮಾತೆ ಪ್ರತಿಮೆ ಬಳಿ ವಿಶೇಷ ಪೂಜೆ ಸಲ್ಲಿಸಲು ಸಕಲ ಸಿದ್ಧತೆಗಳನ್ನೂ ಮಾಡಿಕೊಂ ಡಿತ್ತು. ಪೂಜಾ ಸ್ಥಳವನ್ನು ಸಹ ತಳಿರು ತೋರಣ, ಹೂವುಗಳಿಂದ ಅಲಂಕರಿಸಲಾಗಿತ್ತು. ಸೋಮವಾರ ಮಧ್ಯಾಹ್ನ 1,30ರ ವೇಳೆಗೆ ಆಣೆಕಟ್ಟು ಬಳಿ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಜೊತೆ ಸಚಿವರಾದ ಎನ್. ಚಲುವರಾಯಸ್ವಾಮಿ, ಎಚ್.ಸಿ. ಮಹದೇವಪ್ಪ, ವೆಂಕಟೇಶ್, ಬೋಸರಾಜು ಮತ್ತು ಶಾಸಕರು ಇದ್ದರು. ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿ ಬಾಗಿನ ಸಮರ್ಪಿಸಿದರು. ನಂತರ ಅಣೆಕಟ್ಟು ಕೆಳಭಾಗವಿರುವ ಕಾವೇರಿ ಪ್ರತಿಮೆಗೂ ಕೂಡ ಪೂಜೆ ಸಲ್ಲಿಸಿದರು.

