189
ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕಲು, ಕರ್ನಾಟಕ ಮೈಕ್ರೋ ಫೈನಾನ್ಸ್ (ದಬ್ಬಾಳಿಕೆ ಮತ್ತು ಅಮಾನವೀಯ ಕ್ರಮಗಳ ನಿಯಂತ್ರಣ) ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಗುರುವಾರ ನಡೆದ ಸಂಪುಟ ಸಭೆಯು ಒಪ್ಪಿಗೆ ಸೂಚಿಸಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ಎಚ್.ಕೆ. ಪಾಟೀಲ್, ಕಳೆದ ಕೆಲ ದಿನಗಳಿಂದ ಮೈಕ್ರೋ ಫೈನಾನ್ಸ್ ನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ವಿಚಾರ ಚರ್ಚೆ ಆಗಿತ್ತು. ಸಾಲ ವಸೂಲಿ ಪ್ರಕ್ರಿಯೆಯ ಘಟನೆ ನೋಡಿದರೆ ಬಹಳ ಅಮಾನವೀಯವಾಗಿ ನಡೆದಿದೆ. ಇದರಿಂದ ಆತ್ಮಹತ್ಯೆ ಕೂಡ ನಡೆದಿದೆ. ಹಾಗಾಗಿ, ಮೈಕ್ರೋ ಫೈನಾನ್ಸ್ಗೆ ಕಡಿವಾಣ ಹಾಕಲು ಹೊಸ ಕಾನೂನು ತರುತ್ತಿದ್ದೇವೆ. ಮೈಕ್ರೋ ಫೈನಾನ್ಸ್ ಪ್ರತಿನಿಧಿ, ರಿಸರ್ವ್ ಬ್ಯಾಂಕ್ ಜತೆಗೂ ಸಮಾಲೋಚನೆ ನಡೆಸಲಾಗಿದೆ. ಮಸೂದೆಯ ಕರಡು ಕೂಡ ಸಿದ್ದವಾಗಿದೆ. ಕೆಲವು ತಾಂತ್ರಿಕ ಸಮಸ್ಯೆ ಇದೆ. ಮಸೂದೆ ಅಂತಿಮಗೊಳಿಸಲು ಮುಖ್ಯ ಮಂತ್ರಿಗೆ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು.

