ಬೆಂಗಳೂರು : ರಾಜ್ಯದ ಶಕ್ತಿ ಕೇಂದ್ರವಾಗಿರುವ ವಿಧಾನಸೌಧ ಆವರಣದಲ್ಲಿ ವಿಶಿಷ್ಟ ಶ್ರೀಮಂತ ಕಲೆ, ಪರಂಪರೆಗಳ ಅನಾವರಣ ಹಾಡು, ನೃತ್ಯ, ವೈವಿಧ್ಯಮಯ ಕುಣಿತಗಳ ವೈಭವ ಮೇಳೈಸಿತು. ರಾಜ್ಯದ 50 ವೈವಿಧ್ಯಮಯ ಜಾನಪದ ನೃತ್ಯ ತಂಡಗಳ 500ಕ್ಕೂ ಹೆಚ್ಚು ಜಾನಪದ ನೃತ್ಯಗಾರರು ರೋಮಾಂಚನಗೊಳ್ಳುವಂತೆ ಪ್ರದರ್ಶಿಸಿದ ಸಂಗೀತ, ನೃತ್ಯ ವೈಭವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ನೆರೆದಿದ್ದ ಸಾವಿರಾರು ಜನರು ತಲೆದೂಗಿದರು
ಇದು ‘ನಮ್ಮ ಜಾತ್ರೆ’ಯಲ್ಲಿ ಕಂಡುಬಂದ ದೃಶ್ಯ. ಕರ್ನಾಟಕದ ಶ್ರೀಮಂತ ಪರಂಪರೆ, ಕಲೆಗಳ ವೈವಿಧ್ಯತೆಯು ಶನಿವಾರ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಅನಾವರಣಗೊಂಡಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ‘ನಮ್ಮ ಜಾತ್ರೆ’ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಗೊವಿಂದರಾಜು ಚಿತ್ರನಟಿ ಭಾವನಾ ಮುತಾದವರು ಉಪಸ್ಥಿತರಿದ್ದರು

