ಟೋಕಿಯೋ : ಜಾಗತಿಕ ಆರ್ಥಿಕತೆಯನ್ನು ಸ್ಥಿರತೆಗೆ ತರುವುದಕ್ಕಾಗಿ ಭಾರತ, ಚೀನಾಗಳು ಒಗ್ಗೂಡಿ ಶ್ರಮಿಸುವುದು ತೀರಾ ಅಗತ್ಯವೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಚೀನಾದೊಂದಿಗೆ ಪರಸ್ಪರ ಗೌರವ, ಪರಸ್ಪರ ಹಿತಾಸಕ್ತಿ ಮತ್ತು ಪರಸ್ಪರ ಸಂವೇದನಾಶೀಲತೆ ಆಧಾರಿತ ವ್ಯೂಹಾತ್ಮಕವಾದ ಮತ್ತು ದೀರ್ಘಕಾಲೀನ ದ್ವಿಪಕ್ಷೀಯ ಬಾಂಧವ್ಯಗಳನ್ನು ವಿಸ್ತರಿಸಲು ಭಾರತ ಸಿದ್ದವಿದೆ. ನೆರೆಹೊರೆ ಮತ್ತು ಭೂಮಿಯ ಎರಡು ಬೃಹತ್ ರಾಷ್ಟ್ರಗಳಾಗಿರುವ ಭಾರತ-ಚೀನಾ ನಡುವಿನ ಸ್ಥಿರ, ವಿಶ್ವಾಸಾರ್ಹ ಮತ್ತು ಸೌಹಾರ್ದ ಬಾಂಧವ್ಯಗಳು ಪ್ರಾದೇಶಿಕ ಹಾಗೂ ಜಾಗತಿಕ ಶಾಂತಿ ಮತ್ತು ಸಂಪನ್ನತೆಗಳ ಮೇಲೆ ಧನಾತ್ಮಕ ಪರಿಣಾಮ ಬೀರಬಲ್ಲುವು ಎಂದು ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಯೊಮಿಯುರಿ ಶಿಂಬನ್ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯಿಸಿದ್ದಾರೆ.
ಧನಾತ್ಮಕ ಪ್ರಗತಿ :
ಅಭಿವೃದ್ಧಿ ಸಂಬಂಧಿತ ಸವಾಲುಗಳ ನಿಭಾಯಿಸಲು ಚೀನಾ ಜತೆ ವ್ಯೂಹಾತ್ಮಕ ಸಂಪರ್ಕವನ್ನು ವಿಸ್ತರಿಸಲು ಕೂಡ ಭಾರತ ಸಿದ್ದವಿದೆ ಎಂದಿದ್ದಾರೆ. ಪ್ರಸಕ್ತ ಸನ್ನಿವೇಶದಲ್ಲಿ ಚೀನಾ ಜತೆಗಿನ ಬಾಂಧವ್ಯಗಳ ಸುಧಾರಿಸುವ ಅಗತ್ಯವೇನಿದೆ ಎಂಬ ಪ್ರಶ್ನೆಗೆ, ಅಧ್ಯಕ್ಷ ಕ್ಸಿ ಜಿನ್ಪಿಂಗ್ ಆಹ್ವಾನ ಮೇರೆಗೆ ತಾನು ಎಸ್ಸಿಒ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಂದ ಟಿಯಾನ್ಜಿನ್ಗೆ ಪಯಣಿಸಲಿದ್ದೇನೆ. ಕಳೆದ ವರ್ಷ ಕಝನ್ನಲ್ಲಿ ಅಧ್ಯಕ್ಷ ಕ್ಲಿ ಭೇಟಿ ನಂತರದಲ್ಲಿ ನಮ್ಮ ದ್ವಿಪಕ್ಷೀಯ ಬಾಂಧವ್ಯಗಳಲ್ಲಿ ಧನಾತ್ಮಕ ಪ್ರಗತಿಯಾಗಿದೆ ಎಂದಿದ್ದಾರೆ ಪ್ರಧಾನಿ ಮೋದಿ. ಜಾಗತಿಕ ಆರ್ಥಿಕತೆ ಏರುಪೇರಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಆರ್ಥಿಕತೆಯಲ್ಲಿ ಸ್ಥಿರತೆ ಕಾಪಾಡಲು ಭಾರತ-ಚೀನಾಗಳು ಒಗ್ಗೂಡಿ ದುಡಿಯಬೇಕಿದೆ ಮತ್ತು ಇದು ತೀರಾ ಮಹತ್ವದ ವಿಚಾರ ಎಂದಿದ್ದಾರೆ

