Home » ಕುಂದಾಪುರ : ಯವಕನ ಮೇಲೆ ತಲವಾರ್ ದಾಳಿ
 

ಕುಂದಾಪುರ : ಯವಕನ ಮೇಲೆ ತಲವಾರ್ ದಾಳಿ

by Kundapur Xpress
Spread the love

ಗಂಗೊಳ್ಳಿ: ಬೈಕಿನಲ್ಲಿ ನಿಂತಿದ್ದ ಯುವಕನ ಬಳಿ ಬಂದು ವ್ಯವಹಾರದ ವಿಚಾರವಾಗಿ ಗಲಾಟೆ ತೆಗೆದ ಮೂವರು ದುಷ್ಕರ್ಮಿಗಳ ತಂಡ, ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ ಭೀಕರ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ಆನುಗೋಡು ಎಂಬಲ್ಲಿ ನಡೆದಿದೆ.

ಕುಂದಾಪುರ ನಗರದ ಹಂಗಳೂರು ಗ್ರಾಮದ ಯುನಿಟಿ ಹಾಲ್ ಹತ್ತಿರದ ವನದುರ್ಗಿ ನಿಲಯದ ನಿವಾಸಿ ನಾಗರಾಜ ಜೋಗಿ (27 ವರ್ಷ) ಎಂಬವರೇ ಹಲ್ಲೆಗೊಳಗಾದ ದುರ್ದೈವಿ.

ದಾಳಿಯಿಂದ ಕೂದಲೆಳೆಯಲ್ಲಿ ಪಾರಾದ ಯುವಕನ ಗಲ್ಲಕ್ಕೆ ಬಲವಾದ ಏಟು ಬಿದ್ದು ತೀವ್ರ ರಕ್ತಸ್ತ್ರಾವವಾಗಿದೆ.

ಗಾಯಾಳು ಯುವಕನನ್ನು ತಕ್ಷಣವೇ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೇ 16ರಂದು ಬೆಳಿಗ್ಗೆ ಸುಮಾರು 08:30 ಗಂಟೆಗೆ ನಾಗರಾಜ ಜೋಗಿ ಅವರು ತಮ್ಮ ವೈಯಕ್ತಿಕ ವ್ಯವಹಾರದ ನಿಮಿತ್ತ ತ್ರಾಸಿ ಗ್ರಾಮದ ಆನುಗೋಡು ಎಂಬಲ್ಲಿಗೆ ಬೈಕಿನಲ್ಲಿ ಬಂದಿದ್ದರು. ರಸ್ತೆಯ ಬದಿಯಲ್ಲಿ ಬೈಕ್ ನಿಲ್ಲಿಸಿಕೊಂಡು ಕಾಯುತ್ತಿದ್ದಾಗ, ಅಲ್ಲಿಗೆ ವ್ಯವಹಾರದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳಾದ ಪ್ರದೀಪ್‌ ಹೆಮ್ಮಾಡಿ, ಆದಿತ್ಯ ಶೆಟ್ಟಿ ಮತ್ತು ಶ್ರೀಕಾಂತ ಮೊಗವೀರ ಎಂಬುವವರು ಏಕಾಏಕಿ ನುಗ್ಗಿ ಬಂದಿದ್ದಾರೆ.

ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಆರೋಪಿಗಳಲ್ಲಿ ಒಬ್ಬನಾದ ಪ್ರದೀಪ್ ಹೆಮ್ಮಾಡಿ ಎಂಬಾತ ನಾಗರಾಜನನ್ನು ಕೊಲೆ ಮಾಡುವ ಸ್ಪಷ್ಟ ಉದ್ದೇಶದಿಂದಲೇ ತನ್ನ ಬಳಿಯಿದ್ದ ಕಬ್ಬಿಣದ ರಾಡ್ ತೆಗೆದುಕೊಂಡು ನಾಗರಾಜ ಅವರ ತಲೆಗೆ ಗುರಿಯಿಟ್ಟು ಜೋರಾಗಿ ಬೀಸಿದ್ದಾನೆ.

ಪ್ರದೀಪ್ ರಾಡ್‌ನಿಂದ ತಲೆಗೆ ಹೊಡೆಯಲು ಬಂದ ತಕ್ಷಣ ನಾಗರಾಜ ಜೋಗಿ ಅವರು ಸಮಯಪ್ರಜ್ಞೆ ಬಳಸಿ ಪಕ್ಕಕ್ಕೆ ಸರಿದು ತಪ್ಪಿಸಿಕೊಂಡಿದ್ದಾರೆ. ಆದಾಗ್ಯೂ, ರಾಡ್‌ನ ಭೀಕರ ಏಟು ನಾಗರಾಜ ಅವರ ಗಲ್ಲದ ಭಾಗಕ್ಕೆ ಬಲವಾಗಿ ತಗುಲಿದೆ. ಏಟಿನ ರಭಸಕ್ಕೆ ಗಲ್ಲ ಸೀಳಿ ಹೋಗಿ ತೀವ್ರ ರಕ್ತಸ್ತ್ರಾವ ಉಂಟಾಗಿದೆ.

ಯುವಕ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ದಯೆ ತೋರದ ಉಳಿದ ಆರೋಪಿಗಳಾದ ಆದಿತ್ಯ ಶೆಟ್ಟಿ ಮತ್ತು ಶ್ರೀಕಾಂತ ಮೊಗವೀರ ಅವರು ನಾಗರಾಜನನ್ನು ನೆಲಕ್ಕೆ ಹಾಕಿ ಕಾಲಿನಿಂದ ಮನಸೋಇಚ್ಛೆ ತುಳಿದು, ಕೈಯಿಂದ ತೀವ್ರವಾಗಿ ಜಜ್ಜಿದ್ದಾರೆ.

ಘಟನೆಗೆ ಸಂಬಂಧಿಸಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಕೊಲೆ ಯತ್ನ ಸೇರಿದಂತೆ ಗಂಭೀರ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!