ಕೋಟ : ಪಠ್ಯ ಪುಸ್ತಕಗಳ ಅಧ್ಯಯನದಿಂದ ಚಿಂತನೆಯ ಮಟ್ಟವನ್ನು ಹೆಚ್ಚಿಸುವುದು ಮತ್ತು ಅತ್ಮವಿಶ್ವಾಸವನ್ನು ಮೂಡಿಸುವುದು ಶಿಕ್ಷಣದ ಪ್ರಧಾನ ಉದ್ದೇಶವಾಗಿದೆ.ಆದರೆ ಅಂಕ ಗಳಿಕೆಯೇ ಯಶಸ್ಸಿನ ಮಾನದಂಡವಲ್ಲ, ಗುರಿಗಳನ್ನು ನಿರ್ಧರಿಸುವುದು ಅದರೊಂದಿಗೆ ಪ್ರತಿ ಕ್ಷಣವನ್ನು ಗೆಲುವಿನೊಂದಿಗೆ ಯಶಸ್ಸು ಕಾಣಬೇಕು ಎಂದು ಖ್ಯಾತ ತರಬೇತುದಾರ ಓಂ ಗಣೇಶ್ ಹೇಳಿದರು.
ಕೋಟದ ವಿವೇಕ ವಿದ್ಯಾಸಂಸ್ಥೆಗಳು ಮತ್ತು ಹಿಂದಿನ ವಿದ್ಯಾರ್ಥಿ ಸಂಘಗಳ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರೇರಣಾ – 25 ರ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಶಿಕ್ಷಣ ಸಂಸ್ಥೆಗಳು ಹಣತೆಯಂತೆ. ಮಣ್ಣಿನದ್ದಾಗಲಿ ಚಿನ್ನದ್ದಾಗಲಿ ಹಣತೆಗಿಂತ ಜ್ಯೋತಿ ಮುಖ್ಯವಾಗಿರುತ್ತದೆ. ದುಬಾರಿ ಶುಲ್ಕ ಪಡೆಯುವ ಕ್ಯಾಂಪಸ್ಗಳು ಕ್ವಾಲಿಟಿ ಎಂಬ ಭ್ರಮೆ ದೂರವಾಗಬೇಕು,ವಿದ್ಯಾರ್ಥಿಗಳು ಸಾಂಸ್ಕ್ರತಿಕ ಮತ್ತು ಕ್ರೀಡಾ ಚಟುವಟಿಕೆಗಳಿಂದ ಬದುಕಿನ ತೃಪ್ತಿ ಪಡೆಯಬೇಕು,ವೈಯಕ್ತಿಕ ಸಿದ್ಧಿಯೇ ಪ್ರಸಿದ್ಧಿಯ ಪಥವಾಗಬೇಕೆಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವಡ ಮಾತನಾಡಿ ವಿದ್ಯಾರ್ಥಿಗಳು ಅಂಕ ಗಳಿಕೆಯೊಂದಿಗೆ ವೈಯಕ್ತಿಕ ಪ್ರತಿಭೆ ಗಳ ವಿಕಸನಕ್ಕೆ ಅವಕಾಶ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಆಡಳಿತ ಮಂಡಳಿಯ ಜೊತೆ ಕಾರ್ಯದರ್ಶಿ ಮಂಜುನಾಥ ಉಪಾಧ್ಯ ಮಾರ್ಗದರ್ಶನದಿಂದ ನಮ್ಮ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತರುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಪ್ರೇಮಾನಂದ್ , ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೇಂಪಿ ರಮಾನಂದ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಪಿ.ಸುಧಾಕರ್ ಅಭ್ಯಾಗತರನ್ನು ಪರಿಚಯಿಸಿದರು.
ಜೊತೆ ಕಾರ್ಯದರ್ಶಿ ಜಿ.ಸಂಜೀವ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಬಾಲಕಿಯರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ ಉಡುಪ ಧನ್ಯವಾದ ಸಮರ್ಪಿಸಿದರು.

