Home » ರಾಜ್ಯಪಾಲರ ವಿರುದ್ಧ ಬಿ.ಕೆ. ಹರಿಪ್ರಸಾದ್ ಸಹಿತ ಕಾಂಗ್ರೆಸಿಗರ ಗೂoಡಾಗಿರಿ ಖಂಡನೀಯ
 

ರಾಜ್ಯಪಾಲರ ವಿರುದ್ಧ ಬಿ.ಕೆ. ಹರಿಪ್ರಸಾದ್ ಸಹಿತ ಕಾಂಗ್ರೆಸಿಗರ ಗೂoಡಾಗಿರಿ ಖಂಡನೀಯ

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ

by Kundapur Xpress
Spread the love

ಕೇಂದ್ರ ಸರಕಾರದ ವಿರುದ್ಧ ದ್ವೇಷ ರಾಜಕಾರಣಕ್ಕಾಗಿಯೇ ಕಾಂಗ್ರೆಸ್ ಸರಕಾರ ಕರೆದಿರುವ ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರ ವಿರುದ್ಧ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸಹಿತ ಕಾಂಗ್ರೆಸಿಗರು ನಡೆಸಿರುವ ಗೂoಡಾಗಿರಿ ಖಂಡನೀಯ. ಈ ಹೀನಾಯ ಘಟನೆ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ. ಸಂವಿಧಾನ ವಿರೋಧಿ ನಡೆಯಿಂದ ರಾಜ್ಯಪಾಲರನ್ನು ಅವಮಾನಿಸಿರುವ ಕಾಂಗ್ರೆಸ್ ಸಚಿವರು ಮತ್ತು ಶಾಸಕರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅಗ್ರಹಿಸಿದ್ದಾರೆ.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಸದನದಲ್ಲಿ ರಾಜ್ಯಪಾಲರ ವಿರುದ್ಧವೇ ಗೂಂಡಾ ವರ್ತನೆ ಪ್ರದರ್ಶಿಸುವ ಮೂಲಕ ಕಾಂಗ್ರೆಸಿಗರು ಸಂವಿಧಾನದ ಆಶಯಗಳಿಗೆ ಘನ ಘೋರ ಅಪಚಾರವೆಸಗಿದ್ದಾರೆ.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಡವರ ಪರವಾದ ಸುಧಾರಿತ ಕೇಂದ್ರ ಸರಕಾರದ ಯೋಜನೆಯನ್ನು ವಿರೋಧಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ ಗೂಂಡಾಗಿರಿಯ ಮೂಲಕ ಅಧಿವೇಶನದ ಘನತೆಯನ್ನು ಹಾಳು ಮಾಡಿರುವುದು ಅಕ್ಷಮ್ಯ.

125 ದಿನಗಳ ಉದ್ಯೋಗ ಖಾತರಿ ಎಂಬುದು ಸಂಸತ್ತಿನ ಕಾನೂನು. 60:40 ಅನುಪಾತವು ರಾಜ್ಯದ ಮೇಲೆ ಹೊರೆಯಲ್ಲ, ಬದಲಾಗಿ ಹಳ್ಳಿಯ ಅಭಿವೃದ್ಧಿಗೆ ಮಾಡುವ ಹೂಡಿಕೆಯಾಗಿದೆ.

ಕಾಂಗ್ರೆಸ್ಸಿಗರು ‘ರೋಜ್‌ಗಾರ್‌’ ಯೋಜನೆಯನ್ನು ‘ನರೇಗಾ’ ಎಂದು ಬದಲಾಯಿಸಿ, ನಂತರ ಅದನ್ನು ‘ಮನ್ರೇಗಾ’ ಎಂದು ಪುನರ್ ನಾಮಕರಣ ಮಾಡಿದ್ದರು. ‘ವಿಬಿ-ಜಿ ರಾಮ್‌ ಜಿ’ ಯೋಜನೆಯಡಿ ‘ವಿಕಸಿತ ಗ್ರಾಮ ಪಂಚಾಯತ್ ಪ್ಲಾನ್’ ಮೂಲಕ ಪಂಚಾಯತ್‌ಗಳೇ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತವೆ. ತಂತ್ರಜ್ಞಾನ ಬಳಸಿ ಭ್ರಷ್ಟಾಚಾರಕ್ಕೆ ತಡೆ ಹಾಕಲಾಗುತ್ತದೆ.

ಕಾಂಗ್ರೆಸ್ ಕೇವಲ ರಾಜಕೀಯ ದುರುದ್ದೇಶದಿಂದ ಇಂತಹ ಉದಾತ್ತ ಯೋಜನೆಯನ್ನು ವಿರೋಧಿಸುವ ಜೊತೆಗೆ ಬಡತನ ಮುಕ್ತ ಮತ್ತು ಸ್ವಾವಲಂಬಿ ಗ್ರಾಮಗಳನ್ನು ನಿರ್ಮಿಸುವ ದಿಕ್ಕಿನಲ್ಲಿ ಸದಾ ಅಡ್ಡಗಾಲು ಹಾಕುತ್ತಿರುವುದು ಜನಜನಿತವಾಗಿದೆ. ರಾಜ್ಯದ ಜನತೆ ಕಾಂಗ್ರೆಸ್ಸಿನ ಅಭಿವೃದ್ಧಿ ವಿರೋಧಿ, ಜನ ವಿರೋಧಿ ನೀತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಕಾಂಗ್ರೆಸ್ಸಿಗೆ ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related Articles

error: Content is protected !!