ಮಂಗಳೂರು : ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಬೇಕು ಎಂದು ಒತ್ತಾಯಿಸಿ ವಿಶ್ವಹಿಂದು ಪರಿಷತ್ ವತಿಯಿಂದ ಮೇ 25ರಂದು ಹಮ್ಮಿಕೊಂಡಿರುವ ಬಜ್ಜೆ ಚಲೋ ಕಾರ್ಯಕ್ರಮಕ್ಕೆ ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲೆ ಬೆಂಬಲ ಸೂಚಿಸಿದ್ದು, ಹಿಂದೂ ಸಮುದಾಯ, ಹಿಂದೂ ಕಾರ್ಯಕರ್ತರು, ಸಂಘಟನೆಗಳ ಜೊತೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕೈಜೋಡಿಸಲಿದೆ ಎಂದು ಯುವ ಮೋರ್ಚಾ ಜಿಲ್ಲಾಧ್ಯಕ್ಷ’ ಯು. ನಂದನ್ ‘ಮಲ್ಯ ತಿಳಿಸಿದ್ದಾರೆ.
ಪ್ರಕರಣದ ಹಿಂದೆ ಯಾರಿದ್ದಾರೆ ? ಸುಹಾಸ್ ಶೆಟ್ಟಿ ಹತ್ಯೆಗೆ ಹಣ ಬಂದಿದ್ದು ಹೇಗೆ ? ಇದ್ಯಾವುದರ ಬಗ್ಗೆಯೂ ಸರಿಯಾದ ತನಿಖೆ ನಡೆಯುತ್ತಿಲ್ಲ. ಸ್ವತಃ ಪೊಲೀಸ್ ಇಲಾಖೆಯಲ್ಲೇ ಕೆಲವರ ಬೆಂಬಲದಿಂದ ಈ ಹತ್ಯೆ ನಡೆದಿರುವ ಬಗ್ಗೆ ಅನುಮಾನವಿದೆ. ಹೀಗಿರುವಾಗ, ಅದೇ ಪೊಲೀಸರ ಕೈಯಲ್ಲೇ ತನಿಖೆ ನಡೆಸಿದರೆ ನ್ಯಾಯ ಸಿಗುವುದು ಹೇಗೆ ? ಹೀಗಾಗಿ ಪ್ರಕರಣವನ್ನು ಎನ್ಐಗೆ ವಹಿಸಿಬೇಕು. ರಾಷ್ಟ್ರೀಯ ತನಿಖಾ ದಳದಿಂದ ಮಾತ್ರ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ನ್ಯಾಯ ಸಿಗಲು ಸಾಧ್ಯ ಎಂದು ಅವರು ಹೇಳಿದ್ದಾರೆ

