ಬೆಂಗಳೂರು : ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮನ ಪ್ರಾಣಪ್ರತಿಷ್ಠಾಪನೆ ಸಮಾರಂಭದ ‘ಯಜಮಾನತ್ವ‘ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ 11 ದಿನಗಳ ಕಾಲ ಕಠಿಣ ‘ಯಮ ನಿಯಮ‘ ವ್ರತಾಚಾರಣೆ ಮಾಡುತ್ತಿರುವ ಮೋದಿ ನಿತ್ಯ ಗೋವಿನ ಪೂಜೆ, ಅನ್ನದಾನ ಸೇರಿ ಅನೇಕ ಆಚರಣೆಗಳನ್ನು ಮಾಡುತ್ತಿದ್ದಾರೆ ಎಂಬ ಮಾಹಿತಿಗಳು ತಿಳಿದು ಬಂದಿದೆ.
ವ್ರತಾಚರಣೆ ಮಾಡುತ್ತಿರುವ ಮೋದಿ, ನೆಲದ ಮೇಲೆ ಮಲಗುತ್ತಿದ್ದಾರೆ ಹಾಗೂ ಕೇವಲ ಎಳನೀರು ಮಾತ್ರ ಸೇವಿಸುತ್ತ ಕಠಿಣ ಉಪವಾಸ ಮಾಡುತ್ತಿದ್ದಾರೆ ಎಂಬುದು ತಿಳಿದಿತ್ತು. ಆದರೆ ಇದರೊಂದಿಗೆ ಮೋದಿ, ಶಾಸ್ತ್ರಗಳ ಪ್ರಕಾರ ಗೋ ಪೂಜೆ, ಗೋವಿಗೆ ಆಹಾರ ನೀಡುವುದು, ಅನ್ನದಾನ ಮತ್ತು ವಸ್ತ್ರದಾನ ಸೇರಿದಂತೆ ಇತರ ಅನೇಕ ಆಚರಣೆ ಮಾಡುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಾಮನ ನಂಟು: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ದೇಶದ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಹೀಗೆ ಅವರು ಹೋಗುತ್ತಿರುವ ಎಲ್ಲ ದೇವಸ್ಥಾನಗಳು ರಾಮಾಯಣ ಅಥವಾ ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳೆಂಬ ಇತಿಹಾಸವನ್ನು ಹೊಂದಿರುವ ದೇವಸ್ಥಾನಗಳೇ ಆಗಿವೆ. ಹೀಗೆ ಮೋದಿ ಭೇಟಿ ನೀಡಿದ ದೇವಸ್ಥಾನಗಳೆಂದರೆ, ರಾಮಕುಂಡ, ನಾಸಿಕ್ ಕಾಳರಾಮ ದೇವಸ್ಥಾನ, ಲೇಪಾಕ್ಷಿಯ ವೀರ ಭದ್ರೇಶ್ವರ ಮಂದಿರ, ಕೇರಳದ ಗುರುವಾಯೂರು ಹಾಗೂ ಶ್ರೀ ರಾಮ ಸ್ವಾಮಿ ಮಂದಿರ. ಅಲ್ಲದೇ, ರಾಮನ ನಂಟಿನ ತಮಿಳುನಾಡಿನ ದೇವಸ್ಥಾನಗಳಿಗೂ ಮೋದಿ ಶನಿವಾರ ಭೇಟಿ ನೀಡಲಿದ್ದಾರೆ.

