ಬೆಂಗಳೂರು : ಮಂಗಳೂರಿನ ಕುಡುಪುವಿನಲ್ಲಿ ನಡೆದಿರುವ ಅಪಚಿತ ವ್ಯಕ್ತಿಯ ಸಾವು ಪ್ರಕರಣ ಆತ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕೆ ಸಿಟ್ಟುಕೊಂಡ ಉದ್ರಿಕ್ತರ ಗುಂಪು ಹಲ್ಲೆ ನಡೆಸಿದ್ದರಿಂದ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಗೃಹ ಸಚಿವ ಡಾ| ಜಿ.ಪರಮೇಶ್ವರ್ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಅಪರಿಚಿತ ವ್ಯಕ್ತಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಕ್ಕೆ ಸಿಟ್ಟಿಗೆದ್ದ ಉದ್ರಿಕ್ತರ ಗುಂಪು ಆತನ ಮೇಲೆ ಹಲ್ಲೆ ನಡೆಸಿದೆ. ನಂತರ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಮೃತ ವ್ಯಕ್ತಿಯ ಹೆಸರು, ಹಿನ್ನೆಲೆ ಗೊತ್ತಾಗಿಲ್ಲ. ಹೊರ ರಾಜ್ಯದವನು ಇರಬೇಕೆಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ಸ್ಥಳೀಯ ಪೊಲೀಸರು ಸುಮಾರು ಹತ್ತು, ಹನ್ನೆರಡು ಜನರನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ಘಟನೆ ಹಿಂದೆ ನಿರ್ದಿಷ್ಟವಾಗಿ ಯಾರಿದ್ದಾರೆಂದು ಗೊತ್ತಾಗಿಲ್ಲ. ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ. ಅಪರಿಚಿತ ವ್ಯಕ್ತಿಯ ಹಿನ್ನೆಲೆ ಪತ್ತೆಗೂ ಪೊಲೀಸರು ತಂಡ ರಚಿಸಿದ್ದಾರೆ ಎಂದು ವಿವರಿಸಿದರು.

