ಕುಂದಾಪುರ : ಮನೆಯಲ್ಲಿ ಯಾರೂ ಇಲ್ಲದ ಸಂದರ್ಭಕಳ್ಳರು ಮನೆಯ ಬಾಗಿಲಿನ ಬೀಗವನ್ನು ತುಂಡರಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿದ ಘಟನೆ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರದ ಪಿ. ರವೀಂದ್ರ ಎಂಬವರು ಸಂಸಾರ ಸಮೇತ ಮನೆಯ ಬಾಗಿಲಿಗೆ ಬೀಗ ಹಾಕಿ ಜು.18ರಂದು ವಾರಣಾಸಿ ಯಾತ್ರೆಗೆ ಹೋಗಿದ್ದರು. ಜು.20ರಂದು ಸಂಬಂಧಿಕರಾದ ಕಿರಣ್ ಎಂಬವರು ಮನೆಯ ಬಾಗಿಲು ತೆರೆದಿರುವುದನ್ನು ಕಂಡು ರವೀಂದ್ರ ಅವರಿಗೆ ಕರೆ ಮಾಡಿ ತಿಳಿಸಿದ್ದು, ರವೀಂದ್ರ ಅವರು ಪ್ರವಾಸ ಮೊಟಕುಗೊಳಿಸಿ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ತುಂಡರಿಸಿ ಮನೆಯೊಳಗೆ ಪ್ರವೇಶಿಸಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ನಾಲ್ಕು ಬೆಳ್ಳಿಯ ಹರಿವಾಣಗಳು, ಬೆಳ್ಳಿಯ ಲಕ್ಷ್ಮೀ ಚಿತ್ರವಿರುವ ತಂಬಿಗೆ, ಬೆಳ್ಳಿಯ ಲಕ್ಷ್ಮೀ ದೀಪ, ನಾಲ್ಕು ಬೆಳ್ಳಿಯ ಲೋಟಗಳು, ಬೆಳ್ಳಿಯ ಕುಂಕುಮದ ತಟ್ಟೆ, ಎರಡು ಬೆಳ್ಳಿಯ ಕಾಲುದೀಪ, ಬೆಳ್ಳಿಯ ಆರತಿ, ಸುಮಾರು 22 ಗ್ರಾಂ. ತೂಕದ ಚಿನ್ನದ 7 ವಜ್ರದ ಹರಳಿನ ಒಂದು ಜೊತೆ ಬೆಂಡೋಲೆ, ಕಿವಿ ಚೈನ್, ಸುಮಾರು 47 ಸಾವಿರ ನಗದು ಸಹಿತ ಅಂದಾಜು 4,57 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ.
ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

