ಚಮೋಲಿ : ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಉಂಟಾದ ಹಿಮಪಾತದಲ್ಲಿ ಸಿಲುಕಿದ್ದ ಗಡಿ ರಸ್ತೆ ಸಂಸ್ಥೆಯ (ಬಿಆರ್ಒ) ಶಿಬಿರದ ಸ್ಥಳದಿಂದ ಮೂರು ಹೆಚ್ಚುವರಿ ಶವಗಳನ್ನು ಹೊರತೆಗೆಯಲಾಗಿದ್ದು, ಅವಘಡದಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ 7ಕ್ಕೆ ಏರಿದೆ ಎಂದು ಭಾರತೀಯ ಸೇನೆ ಭಾನುವಾರ ತಿಳಿಸಿದೆ.
ಕಾಣೆಯಾದ ಉಳಿದ ಕಾರ್ಮಿಕರ ಪತ್ತೆಗೆ ರಕ್ಷಣಾ ಕಾರ್ಯಗಳು ನಡೆಯುತ್ತಿವೆ ಎಂದು ಲೆಫ್ಟಿನೆಂಟ್ ಕರ್ನಲ್ ಮನೀಶ್ ಶ್ರೀವಾಸ್ತವ ದೃಢಪಡಿಸಿದ್ದಾರೆ. ಆರಂಭದಲ್ಲಿ ಮತ್ತೊಬ್ಬ ಕಾರ್ಮಿಕ ನಾಪತ್ತೆಯಾಗಿದ್ದಾನೆ ಎಂದು ನಂಬಲಾಗಿತ್ತಾದರೂ, ಆತ ಹಿಮಾಚಲ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿ ಸುರಕ್ಷಿತವಾಗಿರುವುದು ತಿಳಿದುಬಂದಿದೆ
ಏಮ್ಸ್ ರಿಷಿಕೇಶ ಮತ್ತು ಜೋಶಿಮಠದ ಸೇನಾ ಆಸ್ಪತ್ರೆಗಳಲ್ಲಿ ಪ್ರಸ್ತುತ 45 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಬೆನ್ನುಮೂಳೆಯ ಗಾಯದಿಂದ ಬಳಲುತ್ತಿರುವ ಒಬ್ಬ ರೋಗಿಗೆ ಶೀಘ್ರದಲ್ಲೇ ಶಸ್ತ್ರಚಿಕಿತ್ಸೆ ನಡೆಯುವ ಸಾಧ್ಯತೆಯಿದೆ ಎಂದು ಏಮ್ಸ್ ರಿಷಿಕೇಶದ ಪಿಆರ್ಒ ಸಂದೀಪ್ ಸಿಂಗ್ ಹೇಳಿದ್ದಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಸತತ ಎರಡನೇ ದಿನವೂ ಡೆಹ್ರಾಡೂನ್ನ ಐಟಿ ಪಾರ್ಕ್ನಲ್ಲಿರುವ ವಿಪತ್ತು ನಿಯಂತ್ರಣ ಕೊಠಡಿಗೆ ಭೇಟಿ ನೀಡಿದರು. ಇದೇ ವೇಳೆ ರಕ್ಷಣಾ ಕಾರ್ಯಗಳನ್ನು ಹೆಚ್ಚಿಸಲು ‘ಇಂಟೆಲಿಜೆಂಟ್ ಬರ್ತ್ ಅಬ್ಲೆಕ್ಟ್ ಡಿಟೆಕ್ಷನ್ ಸಿಸ್ಟಮ್’ ಸೇರಿ ಸುಧಾರಿತ ಶೋಧ ಸಾಧನಗಳನ್ನು ನಿಯೋಜಿಸಲಾಗಿದೆ.

