ಮುಂಬೈ : ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದುಬಾರಿಯಾಗಿದ್ದು, ಕೆಲ ವರ್ಗಗಳ ಜನರಿಗೆ ಒತ್ತಡ ತರುವಂತಿವೆ ಹೀಗಾಗಿ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರಗಳನ್ನು ಇಳಿಸಬೇಕು. ಹಾಗೆಯೇ ಅಡ್ಡ ದಾರಿಯಲ್ಲಿ ಜನರಿಗೆ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನೂ ನಿಲ್ಲಿಸಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ
ಎಸ್ಬಿಐ ಆಯೋಜಿಸಿದ್ದ ವಾಣಿಜ್ಯ ಶೃಂಗದಲ್ಲಿ ಸೋಮವಾರ ಮಾತನಾಡಿದ ನಿರ್ಮಲಾ ‘ಆರ್ಥಿಕತೆಗೆ ದೇಶೀಯವಾಗಿ ಹಾಗೂ ಜಾಗತಿಕವಾಗಿ ಇರುವ ಸವಾಲುಗಳ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಅರಿವಿದೆ. ಅದರ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬಹಳ ಮುಖ್ಯವಾಗಿ ದೇಶದಲ್ಲಿ ಬ್ಯಾಂಕ್ ಸಾಲ ಪಡೆಯುವುದು ತುಂಬಾ ದುಬಾರಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಉದ್ದಿಮೆಗಳು ಚೆನ್ನಾಗಿ ಕೆಲಸ ಮಾಡಬೇಕು ಅಂದರೆ ಬ್ಯಾಂಕ್ ಸಾಲದ ಬಡ್ಡಿ ದರಗಳು ಕೈಗೆಟಕುವಂತಿರಬೇಕು. ಹೀಗಾಗಿ ಬಡ್ಡಿ ದರಗಳನ್ನು ಇಳಿಕೆ ಮಾಡಿ’ ಎಂದು ಸೂಚಿಸಿದರು.
ಬ್ಯಾಂಕ್ಗಳು ತಮ್ಮ ಮೂಲಭೂತ ಕರ್ತವ್ಯವಾದ ಸಾಲ ನೀಡಿಕೆ ಬಗ್ಗೆ ಗಮನ ಕೇಂದ್ರೀಕರಿಸಬೇಕು. ಅಡ್ಡದಾರಿಯಲ್ಲಿ ವಿಮಾ ಪಾಲಿಸಿಗಳನ್ನು ಮಾರಬಾರದು ಎಂದರು

