ರುದ್ರಪ್ರಯಾಗ್ : ಅಹಮದಾಬಾದ್ ದುರಂತ ಮಾಸುವ ಮುನ್ನವೇ ದೇಶದಲ್ಲಿ ಮತ್ತೊಂದು ವಾಯು ದುರಂತ ಸಂಭವಿಸಿದೆ. ಉತ್ತರಾಖಂಡದ ಪವಿತ್ರ ಕೇದಾರನಾಥ ಯಾತ್ರೆ ಮುಗಿಸಿ ವಾಪಸು ತೆರಳುತ್ತಿದ್ದ ಯಾತ್ರಿಕರ ಹೆಲಿಕಾಪ್ಟರ್ ಪತನಗೊಂಡಿದೆ. ಘಟನೆಯಲ್ಲಿ ಕಾಪ್ಟರ್ನಲ್ಲಿದ್ದ ಪೈಲಟ್ ಸೇರಿದಂತೆ ಎಲ್ಲ 7 ಮಂದಿ ಸಾವನ್ನಪ್ಪಿದ್ದಾರೆ.
ಚಾರ್ ಧಾಮ್ ಮಾರ್ಗದಲ್ಲಿ 40 ದಿನದಲ್ಲಿ ನಡೆದ 5ನೇ ವಾಯು ದುರಂತ ಇದಾಗಿದೆ. ಇದರ ಬೆನ್ನಲ್ಲೇ 2 ದಿನ ಮಟ್ಟಿಗೆ ಕಾಪ್ಟರ್ ಸಂಚಾರ ಸ್ಥಗಿತಕ್ಕೆ ರಾಜ್ಯ ಸರ್ಕಾರ ಆದೇಶಿಸಿದೆ. ಅಲ್ಲದೆ, ಕಾಪ್ಟರ್ ಮಾಲೀಕ ಸಂಸ್ಥೆಯಾದ ಆರ್ಯನ್ ಏವಿಯೇಷನ್ ಕಾರ್ಯಾಚರಣೆ ಅಮಾನತಿಗೆ ಸೂಚನೆ ನೀಡಲಾಗಿದೆ.
ಕೇದಾರನಾಥದಿಂದ ಗುಪ್ತಕಾಶಿಗೆ 6 ಭಕ್ತರನ್ನು ಕರೆದೊಯ್ಯುತ್ತಿದ್ದ ಕಾಪ್ಟರ್ ಇಲ್ಲಿನ ಗೌರಿಕುಂಡ್ ಬಳಿ ಪ್ರತಿಕೂಲ ಹವಾಮಾನದಿಂದಾಗಿ ಪತನಗೊಂಡಿದೆ. ಆರ್ಯನ್ ಏವಿಯೇಷನ್ ಎನ್ನುವ ಖಾಸಗಿ ಸಂಸ್ಥೆಗೆ ಸೇರಿದ ಬೆಲ್ 407 ಕಾಪ್ಟರ್ ಕೇದರನಾಥದಲ್ಲಿ ಭಾನುವಾರ ಬೆಳಿಗ್ಗೆ ಟೇಕಾಫ್ ಆದ ಬಳಿಕ ಸಿಗ್ನಲ್ ಕಳೆದುಕೊಂಡಿತು .ಆ ಬಳಿಕ ಶೋಧ ನಡೆಸಿದಾಗ ಕಣಿವೆಯಲ್ಲಿ ಕಾಪ್ಟರ್ ಬೆಂಕಿ ಹೊತ್ತಿಕೊಂಡು ದುರಂತ ಕ್ಕೀಡಾಗಿರುವುದು ಪತ್ತೆಯಾಗಿದೆ’ ಎಂದು ಅಧಿಕಾರಿ ಗಳು ಹೇಳಿದ್ದಾರೆ
ಘಟನೆಯಲ್ಲಿ ಪೈಲಟ್, ಮಗು ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದಾರೆ. ಮೃತರು ರಾಜಸ್ಥಾನ, ಮಹಾರಾಷ್ಟ್ರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಮೂಲದವರು. ಘಟನೆಯಲ್ಲಿ ಸಾವನ್ನಪ್ಪಿದ್ದ ಕಾಪ್ಟರ್ ಪೈಲಟ್ ರಾಜವೀರ್ಸಿಂಗ್ ಭಾರತೀಯ ಸೇನೆಯಲ್ಲಿ 15 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದು, ವಿವಿಧ ಭೂಪ್ರದೇಶಗಳಲ್ಲಿ ಹಾರಾಟ ನಡೆಸಿರುವ ಅನುಭವ ಹೊಂದಿದ್ದರು’ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

